ಬಾಗಲಕೋಟೆ: ಇಲ್ಲಿನ ಉದ್ಯಾನಗಿರಿಯ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನ ಕೇಂದ್ರದಲ್ಲಿ ಸೋಮವಾರದಿಂದ ಮಾವು–ಹಲಸು ಮೇಳ ಆರಂಭವಾಗಿದೆ. 120ಕ್ಕೂ ಹೆಚ್ಚು ತಳಿಗಳ ಮಾವು ಹಾಗೂ 30ಕ್ಕೂ ಹೆಚ್ಚು ಹಲಸಿನ ತಳಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮಾವು– ಹಲಸು ಬೆಳೆಗಾರರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಪೂರೈಸಲು ತೋಟಗಾರಿಕಾ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಮೂರು ದಿನ ಮೇಳವನ್ನು ಆಯೋಜಿಸಲಾಗಿದ್ದು, ಮೊದಲ ದಿನವಾದ ಸೋಮವಾರ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮೇಳದ ಕುರಿತು ಸರಿಯಾದ ಮಾಹಿತಿ ನೀಡಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂತು.
ಮೇಳದಲ್ಲಿ ಆಪೂಸ್, ಬೆನ್ಶನ್ ಹಾಗೂ ಕೇಶವ್ ಎಂಬ ಮೂರು ಮಾವಿನ ತಳಿಗಳು ಮಾರಾಟಕ್ಕೆ ಲಭ್ಯವಿದ್ದು, ಹಲಸಿನಲ್ಲಿ 11 ವಿವಿಧ ತಳಿಗಳ ಹಣ್ಣುಗಳು ಮಾರಾಟಕ್ಕೆ ಸಿಗುತ್ತಿವೆ. ಮುಖ್ಯವಾಗಿ ಮಾವಿನಲ್ಲಿ ಆಪೂಸ್, ಮಲಗೋವಾ, ತೋತಾಪುರಿ, ಬಾದಾಮ್, ಅರ್ಕಾ ಅರುಣ್, ಮಲ್ಲಿಕಾ, ಕೇಸರ್, ಅಪ್ಪೆ ಮಾವು, ಹುಳಿಮಾವು, ನೀಲಂ, ಡೈರಿ, ಖಾದರ್, ಆಮ್ರಪಾಲಿ ಸೇರಿದಂತೆ ನೂರಕ್ಕೂ ಹೆಚ್ಚು ತಳಿಗಳು ಹಾಗೂ ಹಲಸಿನಲ್ಲಿ ದೊರೆಚಂದ್ರ, ಮಾರನಗೆರೆ, ಸಿಂಗಪುರ್–2, ಮಟ್ಟವ್ ಎರಕ್ಕಾ, ಶ್ರೀಲಂಕಾ ಸೆಲಕ್ಷನ್–3, ಪಾಲುರ್, ಮಂಜೇನಹಳ್ಳಿ ಸೇರಿದಂತೆ ಅನೇಕ ತಳಿಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ.
ನೀರಸ ಪ್ರತಿಕ್ರಿಯೆ: ಮೊದಲ ದಿನ ಮೇಳಕ್ಕೆ ಬೆರಳೆಣಿಕೆಯಷ್ಟು ಜನ ಮಾತ್ರ ಬಂದಿದ್ದರು. ಕೆಲವರಿಗೆ ಮೇಳ ನಡೆಯುತ್ತಿರುವ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಕೂಡ ಇರಲಿಲ್ಲ. ತೋಟಗಾರಿಕಾ ವಿಶ್ವವಿದ್ಯಾಲಯದ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು.
ಇನ್ನೂ ಎರಡು ದಿನ ಮೇಳ
ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆರಂಭವಾಗಿರುವ ಹಲಸು ಹಾಗೂ ಮಾವಿನ ಹಣ್ಣಿನ ಮೇಳ ಇದೇ 30ರವರೆಗೆ ನಡೆಯಲಿದೆ. ಹಣ್ಣುಗಳ ಪ್ರದರ್ಶನದ ಜೊತೆಗೆ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.