ಬಾಗಲಕೋಟೆ: ಹಳೆಯ ನೋಟು ಬದಲಾವಣೆ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸಲು ಪ್ರಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿಯನ್ನು ಮಹಾಲಿಂಗಪುರ ಠಾಣೆ ಪೊಲೀಸರುಶನಿವಾರ ಬಂಧಿಸಿದ್ದಾರೆ.
ಆರೋಪಿಗಳಿಂದ ₹29.40 ಲಕ್ಷ ಮೌಲ್ಯದ ₹1000 ಹಾಗೂ ₹500 ಮುಖಬೆಲೆಯ ಚಲಾವಣೆ ರದ್ದುಗೊಂಡಿರುವ ಹಳೆಯ ನೋಟುಗಳು ಹಾಗೂ ಬೊಲೆರೊ ವಾಹನ ವಶಪಡಿಸಿಕೊಳ್ಳಲಾಗಿದೆ. ಟಕ್ಕಳಕಿಯ ಶಾಂತಪ್ಪ ನಾಂದ್ರೆಕರ, ಗಣಪತಿ ಮಂಗಸೂಳಿ, ಜಮಖಂಡಿಯ ಕೃಷ್ಣಾ ಪವಾರ, ಬೆಳಗಾವಿಯ ಬಸವರಾಜ ಹಡಪದ, ಗೋಕಾಕ್ನ ಹುಸೇನ್ಸಾಬ್ ಮಲ್ಲಾಪುರೆ, ಮಮ್ತಾಜ್ ಪಟೇಲ್, ನಾಗರಾಳದ ಸಂಗೀತಾ ಅಂಟಾಳಿ ಬಂಧಿತರು.
ಘಟನೆಯ ವಿವರ: ₹25 ಸಾವಿರ ಹೊಸ ನೋಟು ಕೊಟ್ಟರೆ ₹1 ಲಕ್ಷ ಮೊತ್ತದ ಹಳೆಯ ನೋಟುಗಳನ್ನು ಕೊಡುತ್ತೇವೆ. ನಮ್ಮ ಬಳಿ ಹೀಗೆ ಕೊಂಡುಕೊಂಡ ಹಳೆಯ ನೋಟುಗಳನ್ನು ಪುಣೆ ಹಾಗೂ ಮುಂಬೈನಲ್ಲಿ ಕೆಲವರಿಗೆ ಕೊಟ್ಟರೆ ಅವರು ₹1 ಲಕ್ಷ ಮೊತ್ತದ ಹಳೆಯ ನೋಟುಗಳ ಬದಲಾಗಿ ₹50 ಸಾವಿರ ಹೊಸ ನೋಟು ಕೊಡಲಿದ್ದಾರೆ ಎಂದು ನಂಬಿಸಿ ಸಾರ್ವಜನಿಕರನ್ನು ವಂಚಿಸಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮಹಾಲಿಂಗಪುರ ಠಾಣೆ ಪಿಎಸ್ಐ ಆರ್.ಎಲ್.ಧರ್ಮಟ್ಟಿ ಹಾಗೂ ಸಿಬ್ಬಂದಿ ಪಟ್ಟಣದ ಕೆನರಾಬ್ಯಾಂಕ್ ಬಳಿ ತೆರಳಿದ್ದು, ಪೊಲೀಸರನ್ನು ನೋಡುತ್ತಲೇ ಬೊಲೆರೊ ವಾಹನದಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಗರಾಳದ ತನ್ನ ತೋಟದ ಮನೆಯಲ್ಲಿ ಹಳೆಯ ನೋಟುಗಳನ್ನು ಶೇಖರಿಸಿಟ್ಟಿರುವ ಬಗ್ಗೆ ಸಂಗೀತಾ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನೋಟುಗಳು ಪತ್ತೆಯಾಗಿವೆ.
ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಿದ ಪೊಲೀಸರ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನಗದು ಬಹುಮಾನ ಘೋಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.