ADVERTISEMENT

ಹೆತ್ತವರ ಮಡಿಲು ಸೇರಿದ ಮಗು

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 9:40 IST
Last Updated 20 ಜುಲೈ 2012, 9:40 IST
ಹೆತ್ತವರ ಮಡಿಲು ಸೇರಿದ ಮಗು
ಹೆತ್ತವರ ಮಡಿಲು ಸೇರಿದ ಮಗು   

ಇಳಕಲ್: ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ಹೆಣ್ಣು ಮಗುವೊಂದು, ಅನಿರೀಕ್ಷಿತವಾಗಿ ಪತ್ತೆಯಾಗಿ ಗುರುವಾರ ಹೆತ್ತಮ್ಮಳ ಮಡಿಲು ಸೇರಿತು. ಈ ಮಗುವನ್ನು ನಾಲ್ಕು ವರ್ಷ ಕಾಲ ಮಮತೆಯಿಂದ ಸಾಕಿದ ಸಾಕು ತಾಯಿಯ ದುಃಖ, ಕಣ್ಣೀರಿಗೆ ಇಲ್ಲಿಯ ಪೊಲೀಸ್ ಠಾಣೆ ಸಾಕ್ಷಿಯಾಯಿತು.

ಬಾಗಲಕೋಟೆ ತಾಲ್ಲೂಕಿನ ಬೇವೂರಿನ ಬಿರಕೇರಿ ಕುಟುಂಬದ 9 ಜನರು ಸಿಂಧನೂರಿಗೆ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು 2008ರ ಅಕ್ಟೋಬರ್ 18ರಂದು ಹೊರಟಾಗ, ಇಳಕಲ್ ಬಸ್ ನಿಲ್ದಾಣದಲ್ಲಿ 2 ವರ್ಷದ ಸೌಜನ್ಯಳನ್ನು ಬಿಟ್ಟು ಬಸ್ ಹತ್ತಿದ್ದರು. ಹತ್ತಾರು ಕಿ.ಮೀ ಕ್ರಮಿಸಿದ ಮೇಲೆ ಸೌಜನ್ಯ ಇಲ್ಲದನ್ನು ತಿಳಿದು ಆತಂಕಗೊಂಡು, ಮರಳಿ ಇಳಕಲ್‌ಗೆ ಬಂದು ಹುಡುಕಿದ್ದರು. ಅವಳು ಸಿಗದಿದ್ದಾಗ ಬಾಲಕಿಯ ದೊಡ್ಡಪ್ಪ ಶ್ರೀಕಾಂತ ಬಿರಕೇರಿ ಪೊಲೀಸರಿಗೆ ದೂರು ನೀಡಿದ್ದರು.

ಈ ಮಧ್ಯೆ ಮುಗ್ಧ ಸೌಜನ್ಯ ಹತ್ತಿ ಕುಳಿತ ಬಸ್ ಬಾಗಲಕೋಟೆಯ ನವನಗರದ ಬಸ್ ನಿಲ್ದಾಣಕ್ಕೆ ಬಂದಿತು. ಅಳುವ ಬಾಲಕಿಗೆ ಯಾರೂ ದಿಕ್ಕಿಲ್ಲ ಎಂಬುದು ತಿಳಿದು ಬಾಲಕಿಯನ್ನು ಭಾನುಬೀ ಹಾಗೂ ಫಕ್ರುದ್ದೀನ್ ಕಲಾದಗಿ ಎಂಬ ದಂಪತಿ ಕರೆದೊಯ್ದಿದ್ದರು.

ಕೆಲ ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಆಕಸ್ಮಿಕವಾಗಿ ಬಾಲಕಿಯ ದೊಡ್ಡಪ್ಪ ಶ್ರೀಕಾಂತ ಹಾಗೂ ಸಾಕು ತಂದೆ ಫಕ್ರುದ್ದೀನ್ ಸಿನಿಮಾ ಟಾಕೀಸ್‌ನಲ್ಲಿ ಭೇಟಿಯಾದಾಗ 15 ವರ್ಷಗಳ ಹಿಂದೆ ಬಾರ್‌ನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ದಿನಗಳನ್ನು ಮೆಲುಕು ಹಾಕಿದರು.

ಮಕ್ಕಳಿಲ್ಲದ ತಾವು ಬಸ್ ನಿಲ್ದಾಣದಲ್ಲಿ 4 ವರ್ಷದ ಹಿಂದೆ ಸಿಕ್ಕ ಹೆಣ್ಣು ಮಗುವೊಂದನ್ನು ಸಾಕಿದ ಬಗ್ಗೆ ಫಕ್ರುದ್ದೀನ್ ತಿಳಿಸಿದರು. ಸೌಜನ್ಯ ಕೂಡ ಎರಡು ವರ್ಷದ ಮಗುವಿದ್ದಾಗಲೇ ಎಂದು ಕಾಣೆಯಾಗಿದ್ದರಿಂದ ಚುರುಕಾದ ಶ್ರೀಕಾಂತ ಸ್ನೇಹಿತನ ಮನೆಗೆ ಹೋಗಿ ಮಗಳನ್ನು ಪತ್ತೆ ಹಚ್ಚಿದರು.

ತಾವು ಸಾಕಿದ ಮಗಳು ನೈಜ ತಂದೆ-ತಾಯಿಯ ಮಡಿಲು ಸೇರುತ್ತಾಳೆ ಎಂದು ಗೊತ್ತಾದಾಗ ಫಕ್ರುದ್ದೀನ್ ದಂಪತಿ ರೋದಿಸಿದರು. ಇತ್ತ ಸೌಜನ್ಯಳ ತಂದೆ ವಾಸುದೇವ ಸಹ ಮಗಳ ಪತ್ತೆಗಾಗಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ.

ಏನೂ ಅರಿಯದ ಸೌಜನ್ಯಳ ಪಾಲಿಗೆ ಮುಸ್ಲಿಂ ದಂಪತಿ ಮಾತ್ರ ತಂದೆ-ತಾಯಿ. ಅವಳು ಅವರನ್ನು ಬಿಟ್ಟು ಹೋಗಲು ತುಂಬಾ ಹಟ ಮಾಡುತ್ತಿತ್ತು. ಮಗುವಿನ ಹಸ್ತಾಂತರ ಪ್ರಕರಣ ಪೊಲೀಸ್ ಸ್ಟೇಶನ್‌ನಲ್ಲಿ ಭಾವನಾತ್ಮಕ ಸನ್ನಿವೇಶಕ್ಕೆ ಸೃಷ್ಟಿಸಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.