ಹುನಗುಂದ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಅಮರಾವತಿ, ರಾಮವಾಡಗಿ ಹಾಗೂ ಧನ್ನೂರ ಕ್ರಾಸ್ಗಳಲ್ಲಿ ಕೆಳಸೇತುವೆ ನಿರ್ಮಿಸಬೇಕು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶೀಘ್ರ ಚರ್ಚೆ ನಡೆಸಿ ಕಾಮಗಾರಿ ಆರಂಭಿಸಬೇಕೆಂದು ಜೆಡಿಎಸ್ ಮುಖಂಡ ಐ.ಜಿ. ಗಡೇದ ಆಗ್ರಹಿಸಿದ್ದಾರೆ.
ಅವರು ಶಾಸಕ ದೊಡ್ಡನಗೌಡ ಪಾಟೀಲರಿಗೆ ಬರೆದ ಪತ್ರದಲ್ಲಿ ವಿನಂತಿಸಿಕೊಂಡಂತೆ, ಚತುಷ್ಪಥ ತೀವ್ರವಾಗಿ ನಡೆದಿದೆ. ಇದೇ ಸಂದರ್ಭದಲ್ಲಿ ಕೆಲಸ ನಡೆಯಬೇಕು. ಈ ಎಲ್ಲ ಸೇತುವೆಗಳಿಂದ ಈ ಭಾಗದ ಹತ್ತಾರು ಗ್ರಾಮಗಳ ರೈತರು, ಶಾಲಾ ಕಾಲೇಜು ಮಕ್ಕಳು ಮತ್ತು ಹುನಗುಂದ ಜನತೆಗೆ ಅನುಕೂಲವಾಗುವುದು ಎಂದರು. ಅದರಂತೆ ನೆನೆಗುದಿಗೆ ಬಿದ್ದ ವಿದ್ಯಾನಗರ ಸೇತುವೆ ಎತ್ತರ, ನೀರಿನ ಟ್ಯಾಂಕ್ ನಿರ್ಮಾಣ ಕೂಡಲೇ ಆರಂಭಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಾಮಗಾರಿಗಳಲ್ಲಿ ಆಗುವ ವ್ಯಾಪಕ ಅನುದಾನ ದುರ್ಬಳಕೆ ನಿಲ್ಲಬೇಕು.
ಹುನಗುಂದ ಹಳ್ಳ ಸಂಪೂರ್ಣ ಜಾಲಿಯಿಂದ ತುಂಬಿದೆ. ಇದರ ಸ್ವಚ್ಛತಾ ಕಾರ್ಯ, ಮಂಜೂರಾದ ಬಸ್ ಡಿಪೊ, ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ಹೊರರಸ್ತೆ, ಪಡಿತರ ಸರಿಯಾದ ವಿತರಣೆ, ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ ನಾಮಫಲಕ ಅಳವಡಿಕೆ ಮುಂತಾದ ಕಾರ್ಯಗಳ ಬಗ್ಗೆ ಶೀಘ್ರ ಗಮನ ಹರಿಸಬೇಕು ಎಂದುಆಗ್ರಹಿಸಿದ್ದಾರೆ.
ಮಿನಿವಿಧಾನ ಸೌಧಕ್ಕೆ ತಾಲ್ಲೂಕು ಕಚೇರಿಗಳು ಬಂದ ಮೇಲೆ ಮೊದಲಿದ್ದ ಕಟ್ಟಡ ಹಾಳು ಸುರಿಯುತ್ತಿದೆ. ಕೂಡಲೇ ಖಾಸಗಿ ಕಟ್ಟಡದಲ್ಲಿರುವ ಇತರ ಕಚೇರಿಗಳನ್ನು ಸ್ಥಳಾಂತರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜನಸಂಪರ್ಕ ಸಭೆಗಳು ನಿಯಮಿತವಾಗಿ ನಡೆದು ಸಾರ್ವಜನಿಕರು ಕುಂದು ಕೊರತೆಗಳಿಗೆ ಸ್ಪಂದಿಸಬೇಕು. ಸಂಸದ ಗದ್ದಿಗೌಡರ ರೈಲು ಮಾರ್ಗ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು.
ವಿವಿಧ ಮಾಸಾಶನ ಫಲಾನುಭವಿಗಳಿಗೆ ವಿತರಣೆಯಾಗಬೇಕು. ಮುಖ್ಯವಾಗಿ ಹುನಗುಂದ ತಾಲ್ಲೂಕನ್ನು ಬರಗಾಲವೆಂದು ಘೋಷಣೆಯಾಗಬೇಕು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.