ADVERTISEMENT

‘ಗೃಹ ರಕ್ಷಕದಳದವರಿಗೆ ಸೌಲಭ್ಯ ಸಿಗಲಿ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 9:42 IST
Last Updated 2 ಜನವರಿ 2014, 9:42 IST

ಮಹಾಲಿಂಗಪುರ: ಗೃಹರಕ್ಷಕ ದಳದವರು ಬಹುತೇಕ ಆರ್ಥಿಕವಾಗಿ ಹಿಂದುಳಿದವರಾಗಿದ್ದು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪ್ರಕೃತಿ ವಿಕೋಪ, ದೊಂಬಿ, ಗಲಭೆ, ಉತ್ಸವ ಮುಂತಾದೆಡೆಗಳಲ್ಲಿ ಮೊದಲು ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರಿಗೆ ಸಹಾಯ ಮಾಡುವ ಇವರಿಗೆ ಸರ್ಕಾರ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ನೀಡುವ ಸಕಲ ಸೌಲಭ್ಯಗಳನ್ನು ನೀಡಬೇಕು ಎಂದು ಮಾಜಿ ಮುಖ್ಯ ಸಚೇತಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಅಂಗಡಿಯವರ ಮೈದಾನದಲ್ಲಿ ನಡೆದ ಜಿಲ್ಲಾ ಗೃಹ ರಕ್ಷಕ ದಳದ ವಾರ್ಷಿಕ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗೃಹ ರಕ್ಷಕ ದಳದವರಿಗೆ ಅತ್ಯಂತ ಕಡಿಮೆ ಸಂಬಳ ದೊರಕುತ್ತಿದ್ದು ಸರ್ಕಾರದ ಅನ್ನಭಾಗ್ಯ ಯೋಜನೆ, ಉಚಿತ ರೇಶನ್ ಹಂಚಿಕೆಯ ಯೋಜನೆಗಳಿಗೆ ಒಳಪಡಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಪುರಸಭೆಯ ಸದಸ್ಯ ಸಂಗಪ್ಪ ಹಲ್ಲಿ ಮಾತನಾಡಿ ಅನುಭವದ ಆಧಾರದ ಮೇಲೆ ಗೃಹರಕ್ಷಕ ದಳದವರನ್ನು ಪೊಲೀಸ್ ಇಲಾಖೆಯಲ್ಲಿ ಭರ್ತಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಎಂ.ಬಿ. ಕೊಲ್ಹಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಧ್ಯ ಖಾಲಿ ಇರುವ 184 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಗೊಂಡಿದ್ದು ಜಿಲ್ಲೆಯ ಹಲವು ಮುಖ್ಯ ಕೇಂದ್ರಗಳಲ್ಲಿ ಘಟಕಗಳನ್ನು ಸ್ಥಾಪಿಸಬೇಕಾ­ಗಿದೆ, ಸರ್ಕಾರ ನಮ್ಮ ಸೇವೆಯನ್ನು ಗುರುತಿಸಿ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಪುರಸಭೆ ಅಧ್ಯಕ್ಷ ಅರ್ಜುನಗೌಡ ಪಾಟೀಲ, ಸದಸ್ಯರಾದ ಶೇಖರ ಅಂಗಡಿ, ಮಂಜುನಾಥ ಬಕರೆ, ಸಿದ್ದಪ್ಪ ಅಲಬಾಳ, ಹೊಳೆಪ್ಪ ಬಾಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಆಕರ್ಷಕ ಪಥ ಸಂಚಲನ: ವಾರ್ಷಿಕ ದಿನಾಚರಣೆಯ ಸಮಾರಂಭದ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗೃಹರಕ್ಷಕ ದಳದವರಿಂದ ಆಕರ್ಷಕ ಪಥ ಸಂಚಲನ ಜರುಗಿತು. ಪರೇಡ್ ಕಮಾಂಡರ್ ಐ.ವಿ. ಗೆದ್ದೆಪ್ಪನವರ, ಪಿಎಸ್‌ಐ ಎಚ್.ಆರ್. ಪಾಟೀಲ, ಐ.ಬಿ. ಹುನಗುಂದ, ಎಲ್.ಎಸ್. ಮುರಗೋಡ, ಶೋಭಾ ಮಡ್ಡೀಮನಿ, ಬಿ.ಪಿ. ಕುರಿ, ಕೆ.ವಿ. ಗದಗಿನ, ಜಿ.ಬಿ. ಕುಳಲಿ, ಜಿ.ಎಸ್. ಗೊಂಬಿ ಹಾಗೂ ಮಹಾಲಿಂಗ ಹಿಕಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.