ಮಹಾಲಿಂಗಪುರ: ‘ಶಿಕಾರಿ ಕಾದಂಬರಿ ಯಲ್ಲಿ ನಾಗಪ್ಪನಂತಹ ಅದ್ಭುತ ಪಾತ್ರ ರಚನೆ ಮಾಡಿ ಓದುಗನ ಮೈ ಮನ ಗಳಲ್ಲಿ ರೋಚಕತೆ ಹುಟ್ಟುವಂತೆ ಮಾಡಿದ ಸಾಹಿತಿ, ಕತೆಗಳ ಮುಖಾಂತರ ಸಾಹಿತ್ಯಾಸಕ್ತರ ತೀವ್ರ ಗಮನ ಸೆಳೆದಿದ್ದ ಹೆಸರಾಂತ ಸಾಹಿತಿ ಯಶವಂತ ಚಿತ್ತಾಲರು ಮರೆಯ ಲಾಗದ ಸಾಹಿತ್ಯ ರಚಿಸಿ ಈಗ ಇಹಲೋಕದಿಂದ ಮರೆಯಾದದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಗಮೇಶ ಕೋಟಿ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಯಶವಂತ ಚಿತ್ತಾಲರ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.
ಚಿತ್ತಾಲರ ಮೂಲ ಕರ್ನಾಟಕ ವಾದರೂ ಮುಂಬೈನಲ್ಲಿ ನೆಲೆಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ, ಕನ್ನಡ ಕಥಾಲೋಕ ಅವರಿಂದ ಶ್ರೀಮಂತಗೊಂಡಿದೆ, ಕಾದಂಬರಿ ಕ್ಷೇತ್ರ ಅವರಿಗೆ ಹೆಸರು ತಂದಿದೆ, ಇನ್ನಷ್ಟು ಕಾಲ ಅವರು ಸರಸ್ವತಿಯ ಸೇವೆ ಮಾಡಬೇಕಿತ್ತು ಎಂದು ಅವರು ಅಗಲಿದ ಸಾಹಿತಿಯ ಗುಣಗಾನ ಮಾಡಿದರು.
ಯಶವಂತ ಚಿತ್ತಾಲರ ಕುರಿತು ಸಾಹಿತಿ ಗಂಗಾಧರ ಅವಟೇರ, ಕಾನಿಪ ಅಧ್ಯಕ್ಷ ಮಹೇಶ ಆರಿ, ಜಯರಾಮ ಶೆಟ್ಟಿ, ಪ್ರೊ.ಶಿವಲಿಂಗ ಸಿದ್ನಾಳ, ಸಾಹಿತಿ ಡಾ.ಅಶೋಕ ನರೋಡೆ ಮಾತನಾಡಿ ದರು.
ಮಲ್ಲೇಶ ಆಳ್ಳಗಿ, ಚಂದ್ರಶೇಖರ ಮೋರೆ, ವಿಷ್ಣು ಬಡಿಗೇರ, ಎಂ.ಐ. ಡಾಂಗೆ, ಎಸ್.ಎಸ್. ಈಶ್ವರಪ್ಪಗೋಳ, ಸುವರ್ಣಾ ಆಸಂಗಿ, ರೋಟರಿ ಅಧ್ಯಕ್ಷ ಜಿ.ಎಸ್. ಗೊಂಬಿ, ಈರಣ್ಣ ಹಲಗತ್ತಿ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.