ADVERTISEMENT

‘ರಾಜ್ಯದಲ್ಲೇ ಮಾದರಿ ಕ್ಷೇತ್ರ ಮಾಡುವೆ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:22 IST
Last Updated 18 ಡಿಸೆಂಬರ್ 2013, 5:22 IST

ಮಹಾಲಿಂಗಪುರ: ಹತ್ತು ಹಲವಾರು ಅಭಿವೃದ್ಧಿಪರ ಕಾಮಗಾರಿಗಳಿಗೆ ನಿರಂತರವಾಗಿ ಸರ್ಕಾರದಿಂದ ಅನುದಾನಗಳನ್ನು ತಂದು ಅದರಿಂದ ಗುಣ ಮಟ್ಟದ ಕಾರ್ಯಗಳನ್ನು ಮಾಡಿಸುವ ಮೂಲಕ ತೇರದಾಳ ಮತಕ್ಷೇತ್ರವನ್ನು ಇಡೀ ರಾಜ್ಯದ ಜನತೆಯ ಗಮನ ಸೆಳೆಯುವಂತೆ ಮಾದರಿ ಮತಕ್ಷೇತ್ರವಾಗಿ ಅಭಿವೃದ್ಧಿ ಪಡಿಸುವ ನನ್ನ ಪ್ರಯತ್ನಕ್ಕೆ ಕ್ಷೇತ್ರದ ಜನತೆ ಸಹಕರಿಸಬೇಕು ಎಂದು ಸಚಿವೆ ಉಮಾಶ್ರೀ ಹೇಳಿದರು.

ಸ್ಥಳೀಯ ಪುರಸಭೆಯ ಸಭಾ ಭವನದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಪರಿಹಾರ ನಿಧಿ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಬಕವಿ – ಜಾಂಬೋಟಿ ರಸ್ತೆ ಕಾಮಗಾರಿ ಆರಂಭಿಸಲಾಗಿದ್ದು ನಿಗದಿ ಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಲಾಗು ವುದು, ಕ್ಷೇತ್ರದ ಏಳು ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ರೂ.11ಕೋಟಿ ಮಂಜೂರಿಯಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗ ಲಿದೆ, ಜಲ ನಿರ್ಮಲ ಯೋಜನೆ ಅಡಿಯಲ್ಲಿ ಢವಳೇಶ್ವರ ಗ್ರಾಮಕ್ಕೆ ರೂ.80 ಕೋಟಿ ಮಂಜೂರಿಯಾಗಿದೆ ಎಂದು ಸಚಿವೆ ಹೇಳಿದರು.

ಇತ್ತೀಚೆಗೆ ಕಾಲು ಬಾಯಿ ರೋಗದಿಂದ ಮೃತ ಪಟ್ಟ ಮೂರು ಜಾನುವಾರುಗಳ ಮಾಲಿಕರಿಗೆ ತಲಾ ರೂ.25 ಸಾವಿರ ಚೆಕ್‌ ಹಾಗೂ ಮುಖ್ಯ ಮಂತ್ರಿಗಳ ಆರೋಗ್ಯ ಪರಿಹಾರ ನಿಧಿಯಿಂದ ಆರು ಜನ ಫಲಾನುಭವಿಗಳಿಗೆ ರೂ.1.28 ಲಕ್ಷ ಪರಿಹಾರ ಧನದ ಚೆಕ್‌ಗಳನ್ನು ಸಚಿವೆ ವಿತರಿಸಿದರು. ತಹಶೀಲ್ದಾರ್ ಡಿ.ಐ. ಹೆಗ್ಗೊಂಡ, ಪುರಸಭೆ ಮುಖ್ಯಾಧಿಕಾರಿ ವಿಜಯ ಮೆಕ್ಕಳಕಿ, ಇಂಜಿನೀಯರ ದಸ್ತಗೀರ ಪಠಾಣ, ಸದಸ್ಯರಾದ ಯಲ್ಲನಗೌಡ ಪಾಟೀಲ, ಜಾವೇದಅಲಿ ಭಾಗವಾನ, ಸಂಗಪ್ಪ ಹಲ್ಲಿ, ಹೊಳೆಪ್ಪ ಬಾಡಗಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.