ಗುಳೇದಗುಡ್ಡ: ನೂತನ ಗುಳೇದಗುಡ್ಡ ತಾಲ್ಲೂಕು ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಕಮತಗಿ ಪಟ್ಟಣ ಪಂಚಾಯ್ತಿ, ಐಹೊಳೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ 3 ಹಳ್ಳಿಗಳು, ಹೂವಿನಹಳ್ಳಿ ಗ್ರಾಮ ಪಂಚಾಯ್ತಿಯ 4 ಹಳ್ಳಿಗಳು, ಮೂಗನೂರ ಗ್ರಾಮ ಪಂಚಾಯ್ತಿಯ 8 ಹಳ್ಳಿಗಳು. ಹಿರೇಮಾಗಿ 4 ಗ್ರಾಮ ಪಂಚಾಯ್ತಿಯ ಅಧ್ಯಕ್ಷರು ಬಾಗಲಕೋಟೆ ಜಿಲ್ಲಾಧಿಕಾರಿಗೆ ಒಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರೆ.
ಈ ಐದು ಪಂಚಾಯ್ತಿಗಳ ಅಧ್ಯಕ್ಷರು ಸೇರ್ಪಡೆಗೆ ಒಪ್ಪಿಗೆ ಬರೆದುಕೊಟ್ಟ ಮನವಿ ಪತ್ರಕ್ಕೆ ಬಾಗಲಕೋಟೆ ಶಾಸಕ ಎಚ್. ವೈ. ಮೇಟಿ ಅನುಮೋದನೆ ನೀಡಿದ್ದಾರೆ. ಇದಲ್ಲದೇ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು, ನಂದಿಕೇಶ್ವರ ಹಾಗೂ ಮಂಗಳೂರು ಗ್ರಾಮ ಪಂಚಾಯ್ತಿಗಳನ್ನು ನೂತನ ಗುಳೇದಗುಡ್ಡ ತಾಲ್ಲೂಕಿಗೆ ಸೇರಿಸಲು ಹೋರಾಟ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಂತಿಮ ಅಧಿಸೂಚನೆಯಲ್ಲಿ ಈ ಎಲ್ಲಾ ಪಂಚಾಯ್ತಿಗಳಲ್ಲಿ ಬರುವ ಹಳ್ಳಿಗಳನ್ನು ಸಹ ನೂತನ ಗುಳೇದಗುಡ್ಡ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕು ಎಂದು ಸರ್ವಪಕ್ಷಗಳ ಮುಖಂಡರು ಮನವಿ ಮಾಡಿದ್ದಾರೆ.
‘ಈ ಎಲ್ಲ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಜನರು ಕಳೆದ 50 ವರ್ಷಗಳಿಂದ ಗುಳೇದಗುಡ್ಡ ಪಟ್ಟಣದ ಜೊತೆಗೆ ನಿಕಟ ಸಂಪರ್ಕ ಮತ್ತು ವ್ಯಾಪಾರ, ವಹಿವಾಟ ಮಾಡುತ್ತ ಬಂದಿದ್ದಾರೆ. ಈ ಹಳ್ಳಿಗಳು ನೂತನ ಗುಳೇದಗುಡ್ಡ ತಾಲ್ಲೂಕಿಗೆ ಹತ್ತಿರ ಇರುವ ಗ್ರಾಮಗಳಾಗಿವೆ.
ಇವುಗಳನ್ನು ಸೇರ್ಪಡೆ ಮಾಡಲು ಯಾರದು ತಕರಾರಗಳಿಲ್ಲ. ಶಾಸಕ ಎಚ್.ವೈ. ಮೇಟಿ ಅವರು ಕೂಡ ಈ ಗ್ರಾಮಗಳನ್ನು ಸೇರಿಸಲು ಅನುಮೋದನೆ ನೀಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಅಶೋಕ ಹೆಗಡಿ, ಕಾರ್ಯದರ್ಶಿ ಸಂಜಯ ಬರಗುಂಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸೇರ್ಪಡೆಗೆ ಒಲವು ತೋರಿಸಿರುವ ಎಲ್ಲ ಪಂಚಾಯ್ತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಜನರಿಗೆ ಧನ್ಯವಾದಗಳು’ ಎಂದು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.