ADVERTISEMENT

‘ಶಾಸಕರಿಂದ ಕಣ್ಣಿಗೆ ಮಣ್ಣೆರಚುವ ತಂತ್ರ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 8:38 IST
Last Updated 19 ಫೆಬ್ರುವರಿ 2018, 8:38 IST

ಇಳಕಲ್ : ಹೊಸ ತಾಲ್ಲೂಕು ಉದ್ಘಾಟನೆ ವೇಳೆ ಇಳಕಲ್‌ ತಾಲ್ಲೂಕು ರಚನೆ ಬಿಜೆಪಿ ಅವಧಿಯಲ್ಲಿ ಆಗಿದೆ ಎನ್ನುವುದನ್ನು ಪರೋಕ್ಷವಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಒಪ್ಪಿಕೊಂಡಿದ್ದಾರೆ. ಅವರಿಗೆ ಅವರಿಗೆ ಅಭಿನಂದನೆಗಳು’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ‘ಹಿಂದಿನ ಶಾಸಕರು ಹುನಗುಂದ ತಾಲ್ಲೂಕನ್ನು ಉದ್ದ ಸೀಳಿ ಇಳಕಲ್‌ ತಾಲ್ಲೂಕು ರಚಿಸಲು ಮುಂದಾಗಿದ್ದರು. ಆದರೆ ನಾನು ಅಡ್ಡ ಸೀಳಿ ಇಳಕಲ್‌ ತಾಲ್ಲೂಕು ರಚಿಸಿದ್ದೇನೆ’ ಎಂದು ಹೊಸ ತಾಲ್ಲೂಕು ಉದ್ಘಾಟನೆ ವೇಳೆ ಹೇಳಿರುವ ಶಾಸಕ ವಿಜಯಾನಂದ ಕಾಶಪ್ಪನವರ ಅದು ಬಿಜೆಪಿಯ ಕೊಡುಗೆ ಎಂಬ ಸತ್ಯ ಒಪ್ಪಿಕೊಂಡಿದ್ದಾರೆ’ ಎಂದರು.

‘ಜಗದೀಶ ಶೆಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ಹೊರತುಪಡಿಸಿ ಹಿಂದಿನ ಯಾರೂ ತಾಲ್ಲೂಕು ರಚನೆ ಬಗ್ಗೆ ತಿರ್ಮಾನಿಸಿರಲಿಲ್ಲ. ಕಂದಾಯ ಸಚಿವ ಶ್ರೀಕಂಠಯ್ಯನವರ ಅವಧಿಯಲ್ಲೂ ತಾಲ್ಲೂಕು ರಚನೆಯ ಬಗ್ಗೆ ಯಾವ ನಿರ್ಧಾರವೂ ಆಗಿರಲಿಲ್ಲ. ಹೀಗಿರುವಾಗ ಮಾವನವರ (ಎಸ್‌.ಆರ್.ಕಾಶಪ್ಪನವರ) ಇಳಕಲ್‌ ತಾಲ್ಲೂಕು ರಚನೆಯ ಕನಸನ್ನು ಪತಿ ವಿಜಯಾನಂದ ಈಡೇರಿಸಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಹೇಳುವುದು, ತಂದೆ ಕನಸು ನನಸು ಮಾಡಿದ್ದೇನೆ ಎಂದು ಶಾಸಕರು ಜನರೆದುರು ಕಣ್ಣೀರು ಸುರಿಸುವುದು ಹಾಸ್ಯಾಸ್ಪದ. ಅದು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಎಂದು ದೊಡ್ಡನಗೌಡ ಆರೋಪಿಸಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ವಿರೇಶ ಉಂಡೋಡಿ, ಬಿಜೆಪಿ ಮುಖಂಡರಾದ ವೆಂಕಟೇಶ ಪೋತಾ, ದುರಗೇಶ ಸುರಪೂರ, ಆದಪ್ಪ ಮೇರನಾಳ, ದಿಲೀಪ ದೇವಗಿರಕರ, ಲಕ್ಷ್ಮಣ ಗುರಂ, ಚೋಳಪ್ಪ ಇಂಡಿ, ಮಹಾಂತಪ್ಪ ಚನ್ನಿ, ಮಹಾಂತೇಶ ಮಠ, ಲಕ್ಷ್ಮಣ ಚಂದರಗಿ, ಅಶೋಕ ಶ್ಯಾವಿ, ಮಾಧುಸಾ ಕಾಟ್ವಾ, ಬಸವರಾಜ ತಾಳಿಕೋಟಿ, ಅರವಿಂದ ಗೌಡರ, ಶೇಖರ ಏಕಬೋಟೆ, ಸಂಗಪ್ಪ ನಾರಗಲ್ಲ, ಬಸನಗೌಡ ಪಾಟೀಲ, ಎಂ.ಆರ್. ಪಾಟೀಲ ಇದ್ದರು.

‘ಅಕ್ಕಿ ಕಳವು: ಶಾಸಕರು ಉತ್ತರಿಸಲಿ’

ಬಡವರಿಗೆ ಹಸಿವು ತಣಿಸಲು ಸರ್ಕಾರದಿಂದ ಬಂದಿದ್ದ ಸಾವಿರಾರು ಕ್ವಿಂಟಾಲ್ ಅಕ್ಕಿ ಕಳುವಾಗಿ 3 ತಿಂಗಳು ಕಳೆದರೂ ಹಗರಣದ ಬಗ್ಗೆ ಯಾವುದೇ ವಿಚಾರಣೆ ನಡೆದಿಲ್ಲ. ಯಾರ ಮೇಲೂ ಕ್ರಮ ಜರುಗಿಲ್ಲ. ಇದೊಂದು ವ್ಯವಸ್ಥಿತ ಕಳ್ಳತನದ ಪ್ರಕರಣವಾಗಿದ್ದು, ಈವರೆಗೂ ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಶಾಸಕರು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಪ್ರಮಖ ಹುದ್ದೆಗಳಿಗೆ ಸ್ವಜಾತಿ ಅಧಿಕಾರಿಗಳನ್ನು ತಂದು ಶಾಸಕರು ಸ್ವಜನ ಪಕ್ಷಪಾತ ಮಾಡಿದ್ದಾರೆ. ಬಹಳಷ್ಟು ಹುದ್ದೆಗಳಿಗೆ ಪೂರ್ಣಾವಧಿ ಅಧಿಕಾರಿಗಲೇ ಇಲ್ಲ. ಇದ್ದವರನ್ನು ರಜೆಯ ಮೇಲೆ ಕಳುಹಿಸಿ ಸ್ವಜಾತಿಯ ನೌಕರರಿಗೆ ಪ್ರಭಾರ ಕೊಡಿಸಲಾಗಿದೆ. ಶಾಸಕರ ದುರಾಡಳಿತಕ್ಕೆ ಹೆದರಿ ಪ್ರಾಮಾಣಿಕ ಅಧಿಕಾರಿಗಳು ತಾಲ್ಲೂಕಿಗೆ ಬರಲು ಹಿಂಜರಿಯುತ್ತಿದ್ದಾರೆ ಎಂದು ದೊಡ್ಡನಗೌಡ ಪಾಟೀಲ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.