
ಹುನಗುಂದ: ತಾಲ್ಲೂಕಿನಲ್ಲಿ ತಿಂಗಳ ಕಳೆದ ಎರಡು ತಿಂಗಳ ಕಾಲ ಸುರಿದ ನಿರಂತರ ಮಳೆಗೆ ಒಟ್ಟು 8,737 ಹೆಕ್ಟರ್ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದ್ದು, ಸಮೀಕ್ಷಾ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದೆ. ಹೀಗಾಗಿ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಬೆಳೆಗಳು ಹೆಚ್ಚಿನ ಹಾನಿ ಉಂಟಾಗಿದೆ.
ಪ್ರಮುಖವಾಗಿ ಕೃಷಿ ಬೆಳೆಗಳು 4,266 ಹೆಕ್ಟರ್ ಹಾಗೂ ತೋಟಗಾರಿಕೆ ಬೆಳೆ 4,471 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದ್ದು, ಅವುಗಳಲ್ಲಿ ಹುನಗುಂದ ಹೋಬಳಿ ವ್ಯಾಪ್ತಿಯಲ್ಲಿ ಹೆಸರು ಬೆಳೆ ಶೇ 100ರಷ್ಟು ಹಾನಿಯಾಗಿದ್ದು, ಅದೇ ರೀತಿ ಅಮೀನಗಡ ಹೋಬಳಿ ವ್ಯಾಪ್ತಿಯಲ್ಲಿ ಗೋವಿನಜೋಳ ಬೆಳೆ ಅಂದಾಜು ಶೇ 30-40 ಬೆಳೆ ನಷ್ಟ ಸಂಭವಿಸಿದೆ. ತೋಟಗಾರಿಕೆ ಬೆಳೆಗಳಾದ ಉಳ್ಳಾಗಡ್ಡಿ ಶೇ 100 ರಷ್ಟು ಹಾಗೂ ಮೆಣಸಿನಕಾಯಿ ಅಂದಾಜು ಶೇ 40ರಷ್ಟು ನಷ್ಟ ಉಂಟಾಗಿದೆ.
ತಾಲ್ಲೂಕಿನ ಪ್ರಮುಖ ಬೆಳೆಯಾದ ತೊಗರಿ ಬೆಳೆ ಮಳೆಗೆ ಕಡಿಮೆ ಪ್ರಮಾಣದಲ್ಲಿ (ಅಂದಾಜು ಶೇ 20ರಷ್ಟು) ಹಾನಿಯಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
ಹುನಗುಂದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾತನಾಡಿ, ತಾಲ್ಲೂಕಿನಲ್ಲಿ ಸತತ ಮಳೆಯಿಂದ ಹಾನಿಯಾದ ಬೆಳೆಗಳ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೊನೆಯ ಹಂತದ ಡಾಟಾ ಎಂಟ್ರಿ ಕಾರ್ಯ ನಡೆಯುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.