ರಬಕವಿ ಬನಹಟ್ಟಿ: ಸಮೀಪದ ನಾವಲಗಿ ಮತ್ತು ಜಗದಾಳ ಗ್ರಾಮದ ನೂರಾರು ವಿದ್ಯಾರ್ಥಿಗಳು ಬಸ್ಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಮುಧೋಳ ಡಿಪೊದಿಂದ ಬರುವ ಬಸ್ ನಾವಲಗಿ ಗ್ರಾಮದಲ್ಲಿ ಜನರಿಂದ ಭರ್ತಿಯಾಗುತ್ತದೆ. ಮುಂದೆ ಜಗದಾಳ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಸ್ಥಳವೇ ದೊರೆಯುವುದಿಲ್ಲ.
ನಾವಲಗಿ ಮತ್ತು ಜಗದಾಳ ಗ್ರಾಮದ ನೂರಾರು ವಿದ್ಯಾರ್ಥಿಗಳು ಬೆಳಗಿನ ಎಂಟು ಗಂಟೆಗೆ ರಬಕವಿ ಬನಹಟ್ಟಿ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಅದೇ ಬಸ್ ನಲ್ಲಿ ಬೇರೆ ಬೇರೆ ಗ್ರಾಮಗಳ ರೈತರೂ ತಮ್ಮ ತೋಟದ ವಸ್ತುಗಳನ್ನು ಕೂಡಾ ಮಾರಾಟ ಮಾಡಲು ಬರುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ಹಣ ಕೊಟ್ಟು ಪ್ರಯಾಣಿಸಬೇಕಾಗಿದೆ.
ಹೆಚ್ಚುವರಿ ಬಸ್ ಗಾಗಿ ಸಾಕಷ್ಟು ಬಾರಿ ಮನವಿ: ಇಲ್ಲಿಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಧೋಳ ಇಲ್ಲವೆ ಜಮಖಂಡಿ ಡಿಪೊದಿಂದ ಹೆಚ್ಚುವರಿ ಬಸ್ ನ್ನು ಬೆಳಿಗ್ಗೆ 7.30ಕ್ಕೆ ಓಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ನಾವಲಗಿ ಗ್ರಾಮದ ಬಸವರಾಜ ಗಣಿ.
ಈ ಕುರಿತು ಈಗಾಗಲೇ ಸಾಕಷ್ಟು ಬಾರಿ ಸಂಬಂಧಪಟ್ಟಅಧಿಕಾರಿಗಳಿಗೆ ಮನವಿಯನ್ನು ಕೂಡಾ ಸಲ್ಲಿಸಲಾಗಿದೆ. ಆದರೆ ಯಾವುದೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿಯ ವಿದ್ಯಾರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.