ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ಲ ಗ್ರಾಮದ ಮಹಾಂತೇಶ ಕಾಶಪ್ಪ ಕಡಪಟ್ಟಿ ಸಾವಯವ ಕೃಷಿ ಪದ್ದತಿ ಅನುಸರಿಸಿ ಬಾಳೆ ಬೆಳೆದು ಅಧಿಕ ಲಾಭ ಪಡೆದು ಈ ಭಾಗದಲ್ಲಿ ಪ್ರಗತಿಪರ ರೈತರಾಗಿ ಹೆಸರು ಮಾಡಿದ್ದಾರೆ.
ಈ ಮೊದಲು ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ ಬೆಳೆಗೆ ಕಡಿಮೆ ದರ ಬರುತ್ತಿದ್ದ ಹಿನ್ನೆಲೆಯಲ್ಲಿ ರೈತರು ಕ್ರಮೇಣ ಪರ್ಯಾಯವಾಗಿ ಲಾಭ ಕೊಡುವ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಅದರಂತೆ ಕೋಟೆಕಲ್ನ ಮಹಾಂತೇಶ ಕಡಪಟ್ಟಿ ತಮ್ಮ 2.30 ಎಕರೆ ಬಾಳೆ ಬೆಳೆದು ವರ್ಷಕ್ಕೆ ₹ 5 ರಿಂದ 6 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಬಿ.ಎ. ಬಿಎಡ್ ಓದಿರುವ ಮಹಾಂತೇಶ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಶಾಲೆಯ ಬಿಡುವಿನ ವೇಳೆಯಲ್ಲಿ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಹೊಲಕ್ಕೆ ಒಂದು ಮುಷ್ಠಿ ರಾಸಾಯನಿಕ ಗೊಬ್ಬರ ಹಾಕಿಲ್ಲ. ವರ್ಷದ ಹಿಂದೆ ಮಹಾರಾಷ್ಟ್ರದ ಜೈನ್ ಕಂಪನಿಯಿಂದ ಬಾಳೆ ಸಸಿ ತಂದು ಎರಡು ಎಕರೆಯಲ್ಲಿ 2.300 ಬಾಳೆ ಸಸಿ ನಾಟಿ ಮಾಡಿದ್ದಾರೆ. ಈ ವೇಲೆ 40 ಟನ್ ಕೊಟ್ಟಿಗೆ ಗೊಬ್ಬರ, 35 ದಿನಗಳ ನಂತರ 45 ಗ್ರಾಂ ಸಾರಜನಿಕ, ರಂಜಕ, 45 ಗ್ರಾಂ ಪೊಟ್ಯಾಷ್ ಗೊಬ್ಬರ ಹಾಕಲಾಗಿದೆ. ಹೀಗಾಗಿ ಒಂದು ಬಾಳೆ ಗಿಡದಲ್ಲಿ 35 ರಿಂದ 40 ಕೆ.ಜಿ ಬಾಳೆ ಹಣ್ಣು ಬೆಳೆದಿದೆ ಎನ್ನುತ್ತಾರೆ ಮಹಾಂತೇಶ.
ಉಳಿದ 30 ಗುಂಟೆಯಲ್ಲಿವಿವಿಧ ಕಾಯಿಪಲ್ಲೆಗಳನ್ನು ಬೆಳೆದು ₹ 1.40 ಲಕ್ಷ ಆದಾಯ ಪಡೆದಿದ್ದಾರೆ. ಹೊಲದಲ್ಲಿ ಒಂದು ಕೊಳವೆ ಬಾವಿ ಹಾಕಿದ್ದಾರೆ. ಜೊತೆಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.
ನೀರಿನ ಸದ್ಬಳಕೆ. ಕೊಟ್ಟಿಗೆ ಗೊಬ್ಬರದ ಪ್ರಮಾಣ. ಮಣ್ಣಿನ ಗುಣಮಟ್ಟದ ರಕ್ಷಣೆಯಲ್ಲಿ ಬಹಳ ಆದ್ಯತೆ ಕೊಡಲಾಗಿದೆ. ಕೂಲಿ ಆಳುಗಳ ಖರ್ಚು ₹1.50 ಲಕ್ಷ ತೆಗೆದು ಈ ವರ್ಷ ₹6 ಲಕ್ಷ ಲಾಭ ಬಂದಿದೆ. ಆಳುಗಳು ಮಾತ್ರವಲ್ಲ ಮನೆಯವರೂ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ.
ಮಹಾಂತೇಶ ಸಂಪರ್ಕ ಸಂಖ್ಯೆ: 8970230209
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.