ಮಹಾಲಿಂಗಪುರ: ಪಟ್ಟಣದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಸಲ್ಲಿಸಿದ ಮನವಿ ಪತ್ರಗಳಿಗೆ ಸಂಬಂಧಿಸಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಚನಬಸು ಹುರಕಡ್ಲಿ ತಿಳಿಸಿದ್ದಾರೆ.
ಪಟ್ಟಣದ ಮುಖಂಡರ ಪಕ್ಷಾತೀತ ನಿಯೋಗದೊಂದಿಗೆ ಗುರುವಾರ ಹಾಗೂ ಶುಕ್ರವಾರ ಬೆಂಗಳೂರಿಗೆ ತೆರಳಿ ವಿವಿಧ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
‘ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಅಂದಾಜು ₹ 2 ಕೋಟಿ ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೆರೆ ಪಕ್ಕದಲ್ಲಿರುವ ಪುರಸಭೆಯ ಎರಡು ಎಕರೆ ಖಾಲಿ ಜಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ ಅಂದಾಜು ₹ 1.50 ಕೋಟಿ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಸರ್ಕಾರಿ ಹಳೆಯ ಕಟ್ಟಡವನ್ನು ಪುರಸಭೆಗೆ ಹಸ್ತಾಂತರಿಸಲು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.
ಮಹಾಲಿಂಗಪುರ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸೂಕ್ತ ಸ್ಪಂದನೆ ನೀಡಿದ್ದಾರೆ. ಶಾಸಕ ಸಿದ್ದು ಸವದಿ ಅವರಿಗೂ ಸಹ ಮನವಿ ಸಲ್ಲಿಸಿದ್ದು, ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದಿದ್ದಾರೆ. ಒಟ್ಟಾರೆ, ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಹುರಕಡ್ಲಿ ಹೇಳಿದರು.
ಯಲ್ಲನಗೌಡ ಪಾಟೀಲ, ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಅರ್ಜುನ ದೊಡಮನಿ, ಸಂಜು ಬಾರಕೋಲ, ವಿಜಯಕುಮಾರ ಸಬಕಾಳೆ, ಲಕ್ಷö್ಮಣ ಮಾಂಗ, ನಜೀರ ಝಾರೆ, ಹಣಮಂತ ತೇಲಿ, ಶಿವಲಿಂಗ ಟಿರಕಿ, ಬಂದು ಪಕಾಲಿ, ಬಸವರಾಜ ಗಿರಿಸಾಗರ, ಶಿವು ಕಡಬಲ್ಲವರ, ಸಿದ್ದು ಬೆನ್ನೂರ, ಆನಂದ ಹಟ್ಟಿ, ಆನಂದ ಬಂಡಿ ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.