ಕುಳಗೇರಿ ಕ್ರಾಸ್: ಸಮೀಪದ ಗೋವನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಬಾದಾಮಿ ತಹಶೀಲ್ದಾರ್ ಕಾವ್ಯಾಶ್ರೀ ಎಚ್. ಭೇಟಿ ನೀಡಿ ಶಿಥಿಲಗೊಂಡ 6 ಕೊಠಡಿಗಳನ್ನು ವೀಕ್ಷಿಸಿದರು.
‘ಶಿಥಿಲಗೊಂಡ ಕಟ್ಟಡದಲ್ಲಿ ಬೋಧನೆ ಮಾಡುವಾಗ ಮಕ್ಕಳ ಜೀವಕ್ಕೆ ತೊಂದರೆಯಾದರೆ ಯಾರು ಜವಾಬ್ದಾರರು. ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿ’ ಎಂದು ಮುಖ್ಯಶಿಕ್ಷಕಿ ಎಸ್.ವಿ. ಸಾಲಿಮಠ ಅವರಿಗೆ ಸೂಚಿಸಿದರು.
‘ಕೊಠಡಿ ಶಿಥಿಲಗೊಂಡಿದ್ದು, ಹೊಸ ಕೊಠಡಿಗಳನ್ನು ನಿರ್ಮಿಸುವಂತೆ ಹಲವು ಬಾರಿ ಶಿಕ್ಷಣ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಸದ್ಯಕ್ಕೆ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ಪ್ರೌಢಶಾಲೆಯ ಸಿಬ್ಬಂದಿಯ ಧನ ಸಹಾಯದಲ್ಲಿ ತರಗತಿಗಳನ್ನು ನಡೆಸಲು ತಾತ್ಕಾಲಿಕವಾಗಿ ಎರಡು ಶೆಡ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಸಾಲಿಮಠ ತಿಳಿಸಿದರು.
‘ಹೊಸ ಕೊಠಡಿಗಳ ನಿರ್ಮಾಣವಾಗುವವರೆಗೆ ಮಠ-ಮಂದಿರಗಳಲ್ಲಿ ಅಥವಾ ಗ್ರಾಮದಲ್ಲಿ ಯಾವುದಾದರೂ ಖಾಲಿ ಇರುವ ಕಟ್ಟಡಗಳಲ್ಲಿ ಪಾಠ ಮಾಡಿ. ಶಾಲೆಗೆ ರಜೆ ನೀಡುವ ಬಗ್ಗೆಯೂ ಜಿಲ್ಲಾಧಿಕಾರಿ ಜೊತೆ ಮಾತನಾಡುವೆ’ ಎಂದು ತಹಶೀಲ್ದಾರ್ .
ಈ ಬಗ್ಗೆ ಎನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಬಾದಾಮಿ ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಅವರನ್ನು ಪ್ರಶ್ನಿಸಿದರು.
‘ಎರಡು ದಿನಗಳ ಹಿಂದೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ₹ 14 ಲಕ್ಷ ವೆಚ್ಚದಲ್ಲಿ ಒಂದು ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ಅತಿ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.