ADVERTISEMENT

ಬನಶಂಕರಿ ಜಾತ್ರೆ; ಸಿದ್ಧತೆಗೆ ಸೂಚನೆ

ಸಚಿವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 16:46 IST
Last Updated 5 ಜನವರಿ 2019, 16:46 IST
ಬಾದಾಮಿಯ ಗುಹೆಗಳಿಗೆ ಶನಿವಾರ ಭೇಟಿ ನೀಡಿದ ಶಾಸಕ ಸಿದ್ದರಾಮಯ್ಯ, ಅಲ್ಲಿ ಪ್ರವಾಸಿಗರಿಗೆ ಕೈಗೊಳ್ಳಬೇಕಾದ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಚಿವರಾದ ಶಿವಾನಂದ ಪಾಟೀಲ, ಸಾ.ರಾ.ಮಹೇಶ, ಕಾಂಗ್ರೆಸ್ ಮುಖಂಡ ಹೊಳಬಸುಶೆಟ್ಟಿ ಚಿತ್ರದಲ್ಲಿದ್ದಾರೆ
ಬಾದಾಮಿಯ ಗುಹೆಗಳಿಗೆ ಶನಿವಾರ ಭೇಟಿ ನೀಡಿದ ಶಾಸಕ ಸಿದ್ದರಾಮಯ್ಯ, ಅಲ್ಲಿ ಪ್ರವಾಸಿಗರಿಗೆ ಕೈಗೊಳ್ಳಬೇಕಾದ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಚಿವರಾದ ಶಿವಾನಂದ ಪಾಟೀಲ, ಸಾ.ರಾ.ಮಹೇಶ, ಕಾಂಗ್ರೆಸ್ ಮುಖಂಡ ಹೊಳಬಸುಶೆಟ್ಟಿ ಚಿತ್ರದಲ್ಲಿದ್ದಾರೆ   

ಬಾಗಲಕೋಟೆ: ಬನಶಂಕರಿ ಜಾತ್ರೆಗೆ ಬರುವವರಿಗೆ ಅನುಕೂಲ ಕಲ್ಪಿಸಲು ಸರಸ್ವತಿ ಹೊಂಡ ಹಾಗೂ ಹರಿದ್ರಾತೀರ್ಥಕ್ಕೆ ನೀರು ತುಂಬಿಸುವಂತೆ ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಮಾವಾಸ್ಯೆಯ ದಿನವಾದ ಶನಿವಾರ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು, ನಂತರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಸುತ್ತಲಿನ ಪರಿಸರ ವೀಕ್ಷಣೆ ಮಾಡಿದರು. ಜನವರಿ 21ರಿಂದ ಜಾತ್ರೆ ಆರಂಭವಾಗಲಿದೆ. ಆಗ ಬರುವವರಿಗೆ ಕಲ್ಪಿಸಬೇಕಾದ ಅಗತ್ಯ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜಾತ್ರೆಯ ವೇಳೆಗೆ ದೇವಸ್ಥಾನ ಸಂಪರ್ಕಿಸುವ ಎಲ್ಲ ರಸ್ತೆಗಳು ದುರಸ್ಥಿಗೊಳ್ಳಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಂಗಡಿ–ಮಳಿಗೆಗಳನ್ನು ಹಾಕಲು ಜಾಗ ನಿಗದಿಗೊಳಿಸುವಂತೆ ತಿಳಿಸಿದರು. ಸಂಚಾರ ದಟ್ಟಣೆ, ಜನದಟ್ಟಣೆ ಆಗದಂತೆ ನಿಗಾ ವಹಿಸುವಂತೆ ಹೇಳಿದರು.

ADVERTISEMENT

ಇದಕ್ಕೂ ಮುನ್ನ ಬಾದಾಮಿಯ ಐತಿಹಾಸಿಕ ಮೇಣದ ಬಸದಿ ಹಾಗೂ ಗುಹೆಗಳನ್ನು ವೀಕ್ಷಣೆ ಮಾಡಿದ ಸಿದ್ದರಾಮಯ್ಯ, ಆ ಪರಿಸರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ಜೆ.ಜಯಾ ಸಿದ್ದರಾಮಯ್ಯ ಅವರಿಗೆ ಅಲ್ಲಿನ ವಾಸ್ತವ ಸ್ಥಿತಿಗತಿ, ಸಾರ್ವಜನಿಕರ ಬೇಡಿಕೆಗಳು ಹಾಗೂ ಕೈಗೊಳ್ಳಲಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.