ಬಾಗಲಕೋಟೆ: ‘ರಾಜ್ಯದಲ್ಲಿನ ಪ್ರವಾಹ ಸಂತ್ರಸ್ತರು ಆಸರೆ ಮನೆಗಳಲ್ಲಿ ವಾಸ ಮಾಡಲು ಒಪ್ಪಿದಲ್ಲಿ ರಾಷ್ಟ್ರೀಯ ವಿಕೋಪ ನಿರ್ವಹಣಾ ನಿಧಿಯಿಂದ (ಎನ್ಡಿಆರ್ಎಫ್) ತಕ್ಷಣ ಅವುಗಳ ದುರಸ್ತಿಗೆ ತಲಾ ₹1 ಲಕ್ಷ ಬಿಡುಗಡೆ ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.
ನಗರದಲ್ಲಿ ಶುಕ್ರವಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲಿಸಿದ ಅವರು, ‘10 ವರ್ಷಗಳ ಹಿಂದೆ ಕಟ್ಟಿರುವ ಆಸರೆ ಮನೆಗಳು ವಾಸಕ್ಕೆ ಯೋಗ್ಯವಿಲ್ಲವಾಗಿವೆ. ಕೆಲವು ಕಡೆ ಮನೆಗಳಿಗೆ ಕಿಟಕಿ–ಬಾಗಿಲುಗಳೇ ಇಲ್ಲ. ರಸ್ತೆ, ಕುಡಿಯುವ ನೀರು, ವಿದ್ಯುತ್ನಂತಹ ಮೂಲ ಸೌಕರ್ಯ ಇಲ್ಲ ಎಂಬ ದೂರುಗಳು ಇವೆ. ಅಲ್ಲಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಜೊತೆಗೆಫಲಾನುಭವಿಗಳು ಅಲ್ಲಿ ವಾಸ ಮಾಡಲು ಒಪ್ಪಿದಲ್ಲಿ ಮಾತ್ರ ಮನೆಗಳ ದುರಸ್ತಿಗೆ ನಾಳೆಯಿಂದಲೇ ಹಣ ಕೊಡಿ ಎಂದು ನಿರ್ದೇಶನ ನೀಡಿದರು.
ಬೇರೆ ಕಡೆ ಜಾಗ ಕೊಡಿ:‘ಸರ್ಕಾರಿ ಜಾಗದಲ್ಲಿ ಕಟ್ಟಿರುವ ಮನೆಗಳುಪ್ರವಾಹದಿಂದ ಹಾನಿಗೊಳಗಾಗಿದ್ದರೂ ಅವು ಅನಧಿಕೃತ ಆಗುವುದರಿಂದ ಪರಿಹಾರ ಕೊಡಲು ನಿಯಮಾವಳಿಯಲ್ಲಿ ಅವಕಾಶವಿಲ್ಲ‘ ಎಂದು ಅಧಿಕಾರಿಗಳು ನೀಡಿದ ವಿವರಣೆಗೆ ಸಿಎಂ ಕೆಂಡಾಮಂಡಲವಾದರು. ‘10ರಿಂದ 20 ವರ್ಷ ಅಲ್ಲಿ ವಾಸವಾಗಿದ್ದರೆಅವರು ಏನು ಮಾಡಬೇಕು. ಎಲ್ಲದಕ್ಕೂ ನಿಯಮಾವಳಿ ಮುಂದೆ ತರಬೇಡಿ. ಸಂತ್ರಸ್ತರಿಗೆ ನೆರವಾಗಲು ಕಾಯ್ದೆಗಳನ್ನು ಸಡಿಲಿಸಿ, ಅಂತಹವರಿಗೆ ಬೇರೆ ಕಡೆ 30/40 ವಿಸ್ತೀರ್ಣದ ನಿವೇಶನ ಕೊಟ್ಟು, ಮನೆ ಕಟ್ಟಿಕೊಳ್ಳಲು ₹5 ಲಕ್ಷ ಪರಿಹಾರ ಕೊಡಿ. ಇದಕ್ಕೆ ಮತ್ತೆ ಎಲ್ಲಿಯೂ ಸ್ಪಷ್ಟೀಕರಣ ಕೇಳುವ ಅಗತ್ಯವಿಲ್ಲ. ಇದನ್ನೇ ಸರ್ಕಾರಿ ಆದೇಶ ಎಂದು ಭಾವಿಸಿ ಕಾರ್ಯರೂಪಕ್ಕೆ ತನ್ನಿ‘ ಎಂದು ಸ್ಪಷ್ಟಪಡಿಸಿದರು.
ಸಂತ್ರಸ್ತರು ಈಗ ವಾಸವಿರುವ ಜಾಗದಲ್ಲಿಯೇ ಮನೆ ಕಟ್ಟಿಕೊಳ್ಳಲು ಬಯಸಿದರೆ ಅವಕಾಶ ಮಾಡಿಕೊಡಿ. ಸ್ಥಳಾಂತರದ ನೆಪದಲ್ಲಿ ಅವರನ್ನು ಹೊಲ–ಗದ್ದೆಗಳಿಂದ ಹತ್ತಾರು ಕಿ.ಮೀ ದೂರಕ್ಕೆ ಒಯ್ದು ಹಾಕಬೇಡಿ. ಈ ವಿಚಾರದಲ್ಲಿ ಸಂತ್ರಸ್ತರ ನಿರ್ಧಾರಕ್ಕೆ ಮೊದಲ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.