ಬಾಗಲಕೋಟೆ: ವ್ಯಕ್ತಿ, ಸಮಾಜ ಹಾಗೂ ದೇಶದ ಬೆಳವಣಿಗೆಯಲ್ಲಿ ಸಂಖ್ಯಾಶಾಸ್ತ್ರ ದಿಕ್ಸೂಚಿಯಾಗಿದೆ ಎಂದು ಜಮಖಂಡಿ ಬಿಎಲ್ಡಿಇ ಸಂಸ್ಥೆಯ ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕ ವಿ.ಎಸ್. ಕುಲಕರ್ಣಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆರೋಗ್ಯ ಇಲಾಖೆಯ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಜಗತ್ತಿನಲ್ಲಿ ಮನುಷ್ಯನ ಹುಟ್ಟಿನಿಂದ ಮರಣದವರೆಗೆ ಹಾಗೂ ಅಡುಗೆ ಮನೆಯಿಂದ ದೇಶದ ಆರ್ಥಿಕ ವ್ಯವಸ್ಥೆಯವರೆಗೆ ಸಂಖ್ಯಾಶಾಸ್ತ್ರ ಅಮೂಲ್ಯ ಪಾತ್ರ ವಹಿಸುತ್ತದೆ’ ಎಂದರು.
ದತ್ತಾಂಶಗಳ ನಿಖರತೆ ಸ್ಪಷ್ಟವಾಗಿದ್ದರೆ, ಅದರ ಬಳಕೆ ಸುಲಭವಾಗುತ್ತದೆ. ಅಂಕಿ–ಸಂಖ್ಯೆ ಆಧರಿಸಿಯೇ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ ಮಾತನಾಡಿ, ದೇಶ ಪ್ರಗತಿಯಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಅಂಕಿ–ಸಂಖ್ಯೆಗಳ ಮಾಹಿತಿ ನಿಖರವಾಗಿರದಿದ್ದಲ್ಲಿ ಯೋಜನೆಗಳು ವಿಫಲವಾಗುತ್ತವೆ. ಸರಿಯಾದ ಅಂಕಿ–ಸಂಖ್ಯೆಗಳ ಸಂಗ್ರಹ ಬಹಳ ಮುಖ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಪಿ. ಸುಂಕದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ, ಜಿಲ್ಲಾ ಪಂಚಾಯಿತಿ ನಿವೃತ್ತ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎಂ.ಆರ್. ಬಾಡಗಿ, ನಿವೃತ್ತ ಸಹಾಯಕ ಸಾಂಖ್ಯಿಕ ಅಧಿಕಾರಿ ಎಂ.ಎಸ್. ಘಟನೂರ ಇದ್ದರು.
ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ 2023-24ನೇ ಸಾಲಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಜಮಖಂಡಿ ತಹಶೀಲ್ದಾರ್ ಕಚೇರಿ ಸಾಂಖ್ಯಿಕ ನಿರೀಕ್ಷಕ ರಾಜೇಶ ದೊಡಮನಿ 2024-25ನೇ ಸಾಲಿನಲ್ಲಿ ಬಾಗಲಕೋಟೆ ತಹಶೀಲ್ದಾರ್ ಕಚೇರಿ ಗಣತಿದಾರ ಸಿ.ಎಸ್.ಕೋಟಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.