ಬಾಗಲಕೋಟೆ: ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ಆರಂಭವಾದ ನಂತರ ಬರೀ ಲಾಠಿ ಏಟಿನ ಮೂಲಕವೇ ಸುದ್ದಿಯಾಗಿದ್ದ ನಗರದ ಪೊಲೀಸರು, ಭಾನುವಾರ ಹಸಿದವರಿಗೆ ಊಟ ನೀಡಿ ತಮ್ಮ ಮಾನವೀಯತೆ ಮುಖ ತೋರಿದರು.
ಲಾಕ್ಡೌನ್ ಆದೇಶ ವಿನಾಕಾರಣಉಲ್ಲಂಘಿಸಿದವರಿಗೆ ಲಾಠಿ ಏಟು, ಬಸ್ಕಿ ಹೊಡೆಸುವುದು, ಬಿಸಿಲಲ್ಲಿ ಬಟ್ಟೆ ಬಿಚ್ಚಿ ನಿಲ್ಲಿಸಿದ್ದು, ತೆವಳಿಸಿದ್ದು, ಕಸ ಹೊಡೆಸಿದ್ದು ಹೀಗೆ ತಮ್ಮ ಬತ್ತಳಿಕೆಯಲ್ಲಿರುವ ಬಹುತೇಕ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿ ಜನರಲ್ಲಿ ಭೀತಿ ಸೃಷ್ಟಿಸಿದ್ದ ಪೊಲೀಸರು, ಇಲ್ಲಿ ಮಾತ್ರ ಕೈಯ್ಯಾರೆ ಅನ್ನದ ಪೊಟ್ಟಣ ಕೊಟ್ಟು ಹಸಿವು ನೀಗಿಸಿದರು. ಸಾಮಾಜಿಕ ಕಳಕಳಿ ಮೆರೆದು ಸಾರ್ಥಕದ ಕ್ಷಣಕ್ಕೆ ಸಾಕ್ಷಿಯಾದರು.
ನಗರದ ರೈಲ್ವೆ ನಿಲ್ದಾಣ, ನವನಗರ, ವಿದ್ಯಾಗಿರಿ ಭಾಗದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಆಹಾರ ವಿತರಣೆ ಮಾಡಿದರು. ರೋಗಿಗಳ ಜೊತೆ ಅವರ ಸಂಬಂಧಿಗಳು, ಆಸ್ಪತ್ರೆ ಸಿಬ್ಬಂದಿ ಹಾಗೂ ರೈಲು ನಿಲ್ದಾಣದ ಬಳಿ ಇದ್ದ ನಿರ್ಗತಿಕರು ಊಟ ಸವಿದರು. ಪುಲಾವ್, ಪಲ್ಯ, ಚಟ್ನಿ, ಮಜ್ಜಿಗೆ, ನೀರಿನ ಬಾಟಲ್ ವಿತರಣೆ ಮಾಡಿದರು. ಪೊಲೀಸರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.