
ಬಾಗಲಕೋಟೆ: ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಲ್ಲಿ ಹೆಸರು ಮಾಡಿದೆ. ದಾಳಿಂಬೆ, ಸಪೋಟ, ಅರಿಸಿನ, ಪೇರಲ, ಪಪ್ಪಾಯಿ, ಲಿಂಬೆ, ವೀಳ್ಯದೆಲೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ಸೂಕ್ತ ಮಾರುಕಟ್ಟೆ ದೊರೆಯದ್ದರಿಂದ ರಸ್ತೆ ಬದಿ ನಿಂತು ಮಾರಾಟ ಮಾಡುವ ಸ್ಥಿತಿ ಇದೆ.
ಕಲಾದಗಿ ಗ್ರಾಮದ ಸುತ್ತ ದಾಳಿಂಬೆ ಹಾಗೂ ಸಪೋಟ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ದಾಳಿಂಬೆ ಬೆಳೆಗೆ ತಗಲುವ ವಿವಿಧ ರೋಗಗಳನ್ನು ನಿಭಾಯಿಸಲಾಗದೇ ಸಾಕಷ್ಟು ರೈತರು ದಾಳಿಂಬೆ ಬೆಳೆಯಿಂದ ದೂರ ಸರಿಯುತ್ತಿದ್ದಾರೆ. ಹೊಸ ಬೆಳೆಗಾರರು ಸೇರ್ಪಡೆಗೊಳ್ಳುತ್ತಿದ್ದಾರೆಯಾದರೂ, ಒಟ್ಟಾರೆ ಬೆಳೆಯುವ ಪ್ರಮಾಣದಲ್ಲಿ ಕಡಿಮೆ ಆಗಿದೆ.
ಕಲಾದಗಿಯಲ್ಲಿ ಕೆಲ ವರ್ಷಗಳ ಹಿಂದೆ ಹಣ್ಣು ಬೆಳೆಗಾರರ ಸಂಘ ಆರಂಭಿಸಲಾಗಿದೆ. ಅದು ಲಾಭದಲ್ಲಿಯೂ ನಡೆಯುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣ್ಣು ಖರೀದಿಯಲ್ಲಿ ಹಿಂದೆ ಬಿದ್ದು, ಅನ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಜಿಲ್ಲೆಯ ರೈತರನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆ ಸ್ಥಾಪಿಸುವ ಕೆಲಸ ಆಗಿಲ್ಲ.
ಇಲ್ಲಿನ ಲಿಂಬೆಯನ್ನು ಪ್ರತಿ ಮಂಗಳವಾರ, ಶುಕ್ರವಾರ ಬೆಳಗಾವಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಪೇರಲಕ್ಕೆ ಗದಗ ಜಿಲ್ಲೆಯ ಕೊಣ್ಣೂರಿನಲ್ಲಿ ಮಾರುಕಟ್ಟೆಯಿದೆ. ಆದರೆ, ಅಲ್ಲಿಗೆ ಒಯ್ಯಲು ಸಾಧ್ಯವಾಗದವರು ಸ್ಥಳೀಯ ಸಂತೆಗಳಲ್ಲಿಯೇ ಮಾರಾಟ ಮಾಡುತ್ತಾರೆ. ಹಣ್ಣು ಹಾಗೂ ಜ್ಯೂಸ್ ಅಂಗಡಿಗಳವರಿಗೂ ಮಾರುತ್ತಾರೆ.
ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ರೈತರು ಒಣಮೆಣಸಿನಕಾಯಿ ಬೆಳೆಯಲಾರಂಭಿಸಿದ್ದಾರೆ. ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿಯ ವಿವಿಧ ತಳಿಗಳನ್ನು ಕಾಣಬಹುದಾಗಿದೆ. ಹುಬ್ಬಳ್ಳಿ, ಬ್ಯಾಡಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಿದೆ. ಬಾಗಲಕೋಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಮಾರಾಟ ವ್ಯವಸ್ಥೆ ಮಾಡಲು ಯತ್ನಿಸಲಾಯಿತು. ಆದರೆ, ಅದಕ್ಕೆ ಉತ್ತಮ ಸ್ಪಂದನೆ ದೊರೆಯಲಿಲ್ಲ.
ತೋಟಗಾರಿಕೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದಲೇ ಇಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಕೆಲವು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಆಗಾಗ ರೈತರಿಗಾಗಿ ಬೆಳೆ ಕ್ಷೇತ್ರೋತ್ಸವ, ತರಬೇತಿ, ಕಾರ್ಯಾಗಾರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ರೈತರ ಬೆಳೆಗಳ ಮೌಲ್ಯವರ್ಧನೆ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.
ಅರಿಸಿನ, ವೀಳ್ಯದೆಲೆಯನ್ನೂ ಹೊರ ರಾಜ್ಯಗಳಿಗೆ ಕಳುಹಿಸಬೇಕಾಗಿದೆ. ಇಲ್ಲಿ ಬೆಳೆದ ಬಹುತೇಕ ತೋಟಗಾರಿಕೆ ಬೆಳೆಗಳಿಗೆ ಸ್ಥಳೀಯವಾದ ಮಾರುಕಟ್ಟೆಯಿಲ್ಲ. ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ಗಳ ಕೊರತೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.