ಬಾಗಲಕೋಟೆ: ‘ಒಂದು ರಾಷ್ಟ್ರ–ಒಂದು ಸಂವಿಧಾನ‘ ಧ್ಯೇಯದಡಿಬಿಜೆಪಿ ರಾಷ್ಟ್ರೀಯ ಏಕತಾ ಅಭಿಯಾನ ಹಮ್ಮಿಕೊಂಡಿದೆ. ಅದರ ಅಂಗವಾಗಿ ಸೆಪ್ಟೆಂಬರ್ 20ರಂದು ನಗರದಲ್ಲಿ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಶಾಸಕ ವೀರಣ್ಣ ಚರಂತಿಮಠ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿ.ವಿ.ವಿ ಸಂಘದ ನೂತನ ಸಭಾಭವನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ‘ವಿಧಿ 370 ರದ್ಧತಿ: ಐತಿಹಾಸಿಕ ತಪ್ಪಿನ ತಿದ್ದುಪಡಿ’ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಶ್ವನಾಥ ಭಟ್ ವಿಶೇಷ ಆತಿಥ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ಜಗದೀಶ ಶೆಟ್ಟರ್ ನಗರದ ಐವರು ಪ್ರಮುಖರ ಮನೆಗೆ ಭೇಟಿ ನೀಡಲಿದ್ದಾರೆ. ವಕೀಲರು, ವೈದ್ಯರು, ವ್ಯಾಪಾರಿಗಳು ಹೀಗೆ ಸಮಾಜದ ಬೇರೆ ಬೇರೆ ವಲಯದ ಗಣ್ಯರ ಮನೆಗೆ ತೆರಳಿ ಅವರಿಗೆ ಅಭಿಯಾನದ ಉದ್ದೇಶವನ್ನು ತಿಳಿಸಿಕೊಡಲಿದ್ದಾರೆ. ಯಾರ ಮನೆಗೆ ಭೇಟಿ ನೀಡಲಿದ್ದಾರೆ ಎಂಬ ವಿವರವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.