ಗುಳೇದಗುಡ್ಡ: ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದ ಕಲಾ ವೇದಿಕೆಯಿಂದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕಮಲಾಕ್ಷಿ ಅಳಗುಂಡಿ ಅವರ ಚೊಚ್ಚಲ ಕವನ ಸಂಕಲನ ‘ಮಮತೆಯ ಮಡಿಲು’ ಬಿಡುಗಡೆ ಮಾಡಲಾಯಿತು.
ಸಾಹಿತಿ ಪ್ರೊ.ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿ, ‘ತಾಯಿ, ಗುರು, ಸ್ನೇಹ, ಪ್ರೀತಿ -ಪ್ರೇಮ ಕುರಿತು, ವರ್ತಮಾನದ ಸತ್ಯಗಳನ್ನು ಕಮಲಾಕ್ಷಿ ಅಳಗುಂಡಿ ಅವರ ಕವನ ಸಂಕಲನ ಒಳಗೊಂಡಿದೆ’ ಎಂದರು.
ಪ್ರಾಚಾರ್ಯ ಪ್ರೊ.ಎನ್.ವೈ.ಬಡಣ್ಣವರ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ‘ನಮ್ಮ ಕಲಾವಿಭಾಗದ ಪ್ರತಿಭೆ ಕಮಲಾಕ್ಷಿ ಅಂತಿಮ ವರ್ಷದಲ್ಲಿಯೇ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ ವಿಭಾಗ ಹಾಗೂ ಕಾಲೇಜಿನ ಪ್ರಾಧ್ಯಾಪಕ ಬಳಗದವರು ಸಹಕರಿಸಿ, ಸಾಹಿತ್ಯ ಸ್ಪೂರ್ತಿ ಅಧ್ಯಾಪಕರು ಬಳಗದ ವತಿಯಿಂದ ಮುದ್ರಿಸಿ ಈ ಕವನ ಸಂಕಲನ ಬಿಡುಗಡೆ ಮಾಡಿರುವುದು ಸಂತಸದ ವಿಷಯ’ ಎಂದರು.
ಪ್ರೊ.ಪಿ.ಬಿ.ಕಣವಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಮಲಾಕ್ಷಿ ಅಳಗುಂಡಿ ಅವರನ್ನು ಕನ್ನಡ ವಿಭಾಗದಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರೊ.ಎಂ.ಎಸ್.ಪಾಟೀಲ, ಪ್ರೊ.ಮೂಕಪ್ಪ ಚನ್ನದಾಸರ, ಪ್ರೊ.ಮಂಜಣ್ಣ, ಪ್ರೊ. ಚಿದಾನಂದ ನಂದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.