
ಹೆಬ್ಬಳ್ಳಿ (ಬಾದಾಮಿ): ಗ್ರಾಮದ ಬಿಎಸ್ಎಫ್ ಯೋಧ ಮನೆಯಲ್ಲಿ ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಹನುಮಂತ ನೆರಳೆ ತಿಳಿಸಿದರು.
ಮಲ್ಲಯ್ಯ ಬಸಯ್ಯ ರೇಷ್ಮಿ (38) ಮೃತ ಯೋಧ. ರಜೆಯ ಮೇಲೆ ಊರಿಗೆ ಬಂದಿದ್ದರು. ಮಿಜೋರಾಂ ಗಡಿ ಪ್ರದೇಶದ ಐಜ್ವಾಲಾದ ಬಿ.ಎಸ್.ಎಫ್. ಯೋಧರಾಗಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಜೀವನದಲ್ಲಿ ಜಿಗುಪ್ಸೆ ಮೂಡಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ತಂದೆ, ತಾಯಿ ಇದ್ದಾರೆ.
ಮೃತ ಯೋಧನ ನಿಧನದಿಂದ ಗ್ರಾಮದಲ್ಲಿ ಮೌನ ಅವರಿಸಿತ್ತು. ಕುಟುಂಬದ ಸದಸ್ಯರು ದುಃಖಿಸುವುದು ಮನ ಮಿಡಿಯುವಂತಿತ್ತು. ಯೋಧನ ಪತ್ನಿ, ಪುತ್ರಿಯರು ಮತ್ತು ಪೋಷಕರು ಅಳುವುದನ್ನು ಕಂಡು ಸಾರ್ವಜನಿಕರಿಗೂ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಗಣ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಪುಷ್ಪ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದರು. ಯುವಕರು ಯೋಧನಿಗೆ ಜೈಕಾರ ಹಾಕಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿಯಿತು.
ತಹಶೀಲ್ದಾರ್ ಶಿವಾನಂದ ಬೊಮ್ಮನ್ನವರ, ಪೊಲೀಸ್ ಅಧಿಕಾರಿಗಳು, ಗಣ್ಯರು ಮತ್ತು ಗ್ರಾಮಸ್ಥರು ಅಂತಿಮ ಗೌರವ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.