ADVERTISEMENT

ಕುಳಗೇರಿ ಕ್ರಾಸ್ | ಮದುವೆ ಋತು: ಪ್ರಯಾಣಿಕರ ಪರದಾಟ

ಸಿಬ್ಬಂದಿ, ಬಸ್‌ ಕೊರತೆ: ತುಂಬಿ ತುಳುಕುತ್ತಿರುವ ಬಸ್‌ ನಿಲ್ದಾಣ

ರಾಮಕೃಷ್ಣ ಕುಲಕರ್ಣಿ
Published 12 ಮೇ 2025, 4:51 IST
Last Updated 12 ಮೇ 2025, 4:51 IST
   

ಕುಳಗೇರಿ ಕ್ರಾಸ್: ನಾಲ್ಕು ರಸ್ತೆಗಳು ಕೂಡುವ ಕುಳಗೇರಿ ಕ್ರಾಸ್‌ ಬಸ್‌ ನಿಲ್ದಾಣ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ಬೇಸಿಗೆಯಲ್ಲಿಯಂತೂ ಮದುವೆ, ರಜೆ, ಪ್ರವಾಸಿಗರ ದಟ್ಟಣೆಯಿಂದ ಕಾಲು ಇಡಲು ಆಗದಷ್ಟು ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವಂತೆ ಆಗಿದೆ.

ಗ್ರಾಮದ ಬಸ್ ನಿಲ್ದಾಣದಲ್ಲಿ ಭಾನುವಾರ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ, ನಿಶ್ಚಿತಾರ್ಥ, ರಜೆ ಕಾರಣದಿಂದ ಗಣನೀಯ ಸಂಖ್ಯೆಯಲ್ಲಿ ಪ್ರಯಾಣಿಕರು ಜಮೆ ಆಗಿದ್ದರು. ತಾಸುಗಟ್ಟಲೆ ನಿಂತರೂ ಬಂದ ಬಸ್‌ ಕ್ಷಣಾರ್ಧದಲ್ಲಿಯೇ ತುಂಬಿ ಹೋಗುತ್ತವೆ. ಟಿಕೆಟ್‌ಗಾಗಿ ಮಾರ್ಗಮಧ್ಯೆ ನಿಲ್ಲಿಸಿ ಮತ್ತೆ ಮುಂದೆ ಸಂಚರಿಸಬೇಕಾದರೆ ಸಮಯ ಪಾಲನೆ ಕೂಡಾ ಆಗುತ್ತಿಲ್ಲ. ಇದರಿಂದ ಮಹಿಳೆ, ಮಕ್ಕಳು, ವೃದ್ಧರ ಗೋಳು ಹೇಳತೀರದು.

ಗ್ರಾಮದ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿ-ವಿಜಯಪುರ, ಇಳಕಲ್ಲ–ಹುಬ್ಬಳ್ಳಿ ಮಾರ್ಗವಾಗಿ ದಿನಕ್ಕೆ 250–300ಕ್ಕೂ ಹೆಚ್ಚು ಬಸ್‌ ಸಂಚರಿಸಿದರೆ, ಬಾದಾಮಿ –ರಾಮದುರ್ಗ ಕಡೆಗೆ ಸುಮಾರು 100ಕ್ಕೂ ಹೆಚ್ಚು ಬಸ್ಸು ಸಂಚರಿಸುತ್ತಿವೆ.ಆದರೂ ಕೂಡಾ ಜನರಿಗೆ ಸಾಕಾಗುತ್ತಿಲ್ಲ ಎಂದು ಸಂಚಾರಿ ನಿರೀಕ್ಷಕ ಕೆ.ವಿ.ಪತ್ತಾರ ತಿಳಿಸಿದರು.

ADVERTISEMENT

ಇಂದು ಗ್ರಾಮದ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಕಂಡು ಬಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶುಭ ಕಾರ್ಯಕ್ಕೆ ತೆರಳುತ್ತಿರುವುದರಿಂದ ನಿರ್ವಹಣೆ ಮಾಡುವುದು ಕಠಿಣವಾಗಿದೆ.

ಸುತ್ತಲಿನ 40ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಬಸ್‌ ನಿಲ್ದಾಣವೇ ಪ್ರಮುಖ ಸಂಪರ್ಕ ಸಾಧನವಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಿಕ್ಕಿರಿದು ಜನರು ಪ್ರಯಾಣಿಸುತ್ತಿದ್ದಾರೆ. ಚಾಲಕರ ಪರಿಸ್ಥಿತಿ ಒಂದು ರೀತಿಯಾದರೆ, ನಿರ್ವಾಹಕರ ಸಂಕಷ್ಟ ಒಂದು ರೀತಿಯದ್ದಾಗಿದೆ. ಟಿಕೆಟ್‌ಗಾಗಿ ಆಧಾರ್‌ ಕಾರ್ಡ್‌ ನೋಡಿ ಟಿಕೆಟ್‌ ಕೊಡುವುದು ಸಾಹಸದ ಕೆಲಸವಾಗಿದೆ.

ತೊಂದರೆಗೆ ಕಾರಣ: ಭಾನುವಾರ ಹೆಚ್ಚಿನ ಮದುವೆಗಳು ಇರುವುದರಿಂದ ಕೆಲವು ಬಸ್‌ಗಳು ಮುಂಗಡ ಕಾಯ್ದಿರಿಸಿ ಬಿಡಲಾಗಿದೆ. ಕೆಲವು ಸಿಬ್ಬಂದಿ ತಮ್ಮ ಮನೆಯಲ್ಲಿಯೇ ಮದುವೆ ಮುಂತಾದ ಶುಭಕಾರ್ಯಕ್ಕೆ ರಜೆ ಮೇಲೆ ಇದ್ದಾರೆ. ಯಾವುದೇ ಬಸ್‌ಗಳು ಖಾಲಿ ಇದ್ದರೂ ಅವುಗಳನ್ನು ಓಡಿಸಲಾಗುತ್ತಿದೆ. ಆದರೂ ಕೂಡಾ ದಟ್ಟಣೆ ಕಡಿಮೆಯಾಗಿಲ್ಲ.

ಅಲ್ಲದೇ ಪ್ರವಾಸಿಗರು ಶಿವಯೋಗ ಮಂದಿರ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ ದೇವಿ ದರ್ಶನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಸೋಮವಾರ ಮಹಾಕೂಟದ ಮಹಾಕೂಟೇಶ್ವರನ ಜಾತ್ರೆ ಇರುವುದರಿಂದ ಸಾವಿರಾರು ಸಂಖ್ಯೆಯ ಭಕ್ತರು ಬಸ್‌ಗಾಗಿ ಕಾಯುತ್ತಿರುವುದರಿಂದ ದಟ್ಟಣೆ ಮತ್ತಷ್ಟು ಹೆಚ್ಚಿದೆ.

ಉಚಿತ ಯೋಜನೆ ಸರ್ಕಾರ ನೀಡಲಿ. ಆದರೆ ಕಾಟಾಚಾರಕ್ಕೆ ಇರಬಾರದು. ಪ್ರಯಾಣಿಕರ ಲಭ್ಯತೆ ಆಧಾರದ ಮೇಲೆ ಹೆಚ್ಚಿನ ಬಸ್‌ಗಳ ಸೌಲಭ್ಯ ಓಡಿಸಬೇಕು’ ಎಂದು ಕೆಲಸದ ನಿಮಿತ್ತ ತೆರಳುತ್ತಿದ್ದ ಪುರುಷರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

‘ರಜೆ ಇರುವುದರಿಂದ ಬಸ್‌ ಸಂಖ್ಯೆ ಅಷ್ಟೇ ಇದೆ. ಆದರೆ ಪ್ರಯಾಣಿಕರ ಸಂಖ್ಯೆ ಮಿತಿ ಮೀರಿದೆ. ಒಂದು ಬಸ್‌ ಅನ್ನು ಡಿಪೋದಿಂದ ಹೊರಗೆ ಬಿಟ್ಟರೆ, 10 ಬಸ್‌ಗಳಲ್ಲಿ ಹತ್ತುವಷ್ಟು ಪ್ರಯಾಣಿಕರು ಜಮೆ ಆಗುತ್ತಾರೆ. ಇದರಿಂದ ಯಾವ ಮಾರ್ಗದಲ್ಲಿ ಬಸ್‌ ಓಡಿಸಬೇಕು ಎಂಬುವುದೇ ತಿಳಿಯುತ್ತಿಲ್ಲ. ನಿಯಂತ್ರಣ ನಮ್ಮ ಕೈಮೀರಿದೆ’ ವ್ಯವಸ್ಥಾಪಕ ಅಶೋಕ ಕೋರಿ ಅಸಹಾಯಕತೆ ವ್ಯಕ್ತಪಡಿಸಿದರು.

 ಚಾಲಕ, ನಿರ್ವಾಹಕರ ಮಕ್ಕಳ ಮದುವೆಯಿಂದ ಸಿಬ್ಬಂದಿ ಕೊರತೆ ಇದೆ. ಕೆಲವು ಬಸ್‌ಗಳು ಮುಂಗಡ ಬುಕ್ಕಿಂಗ್‌ ಮಾಡಿದ್ದರಿಂದ ಬಸ್‌ ಕಡಿಮೆಯಾಗಿದೆ. ನಾವು ಕೂಡಾ ಅಸಾಯಕರಾಗಿದ್ದೇವೆ.
ಅಶೋಕ ಕೋರಿ, ಬಾದಾಮಿ ಬಸ್‌ ಘಟಕ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.