ಬಾಗಲಕೋಟೆ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಬೃಹತ್ ತಿರಂಗಾ ಯಾತ್ರೆ ನಡೆಸಿದರು.
ಯಾತ್ರೆಯಲ್ಲಿ ವಿದ್ಯಾರ್ಥಿಗಳು 500 ಮೀಟರ್ ಉದ್ದದ ತ್ರಿವರ್ಣ ಧ್ವಜ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಬಿ.ವಿ.ವಿ ಸಂಘದ ಬೀಳೂರು ಅಜ್ಜನ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ ತಲುಪಿ ನಂತರ ಹೊಳೆ ಆಂಜನೇಯ ದೇವಸ್ಥಾನ ಮುಂಭಾಗ ಸಮಾವೇಶಗೊಂಡಿತು. ರ್ಯಾಲಿಯುದ್ಧಕ್ಕೂ ಭಾರತ ಮಾತಾಕಿ ಜೈ ಘೋಷಣೆಗಳು ಮೊಳಗಿದವು. ರಾಷ್ಟ್ರ ಹಿತಕ್ಕಾಗಿ ಸಿಎಎ ಬೆಂಬಲಿಸುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು.
ಈ ವೇಳೆ ಎಬಿವಿಪಿ ನಗರ ಘಟಕದ ಉಪಾಧ್ಯಕ್ಷ ಎಲ್.ಜಿ.ವೈದ್ಯ ಮಾತನಾಡಿ, 1955ರಲ್ಲೇ ಸಿಎಎ ಕಾಯ್ದೆ ಜಾರಿಯಾಗಿದೆ. ಈಗ ಅದನ್ನು ತಿದ್ದುಪಡಿ ಮಾಡಲಾಗಿದೆ. ಯಾರ ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆ ಇದಲ್ಲ. ಬದಲಾಗಿ ಪೌರತ್ವ ಕೊಡಲಾಗಿದೆ. ವಿನಾಕಾರಣ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುವ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಂಘಟನೆಯ ಕರೆಗೆ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರುವುದು ಸಂತಸದ ಸಂಗತಿರ. ದೇಶದ ಏಕತೆಗೆ ಧಕ್ಕೆ ಬಂದಾಗ ಈ ರೀತಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಎಬಿವಿಪಿ ನಗರ ಘಟಕದ ಅಧ್ಯಕ್ಷ ಪ್ರೊ.ಕುಲಕರ್ಣಿ, ವಿಭಾಗ ಸಂಘಟನಾ ಕಾರ್ಯದರ್ಶಿ ಸಿದ್ದರಾಜು, ವಿಭಾಗ ಸಂಚಾಲಕ ಪ್ರಕಾಶ ಪೂಜಾರ, ನಗರ ಸಂಘಟನಾ ಕಾರ್ಯದರ್ಶಿ ಸಂತೋಷ, ಕಾರ್ಯದರ್ಶಿ ಪ್ರಕಾಶ ಚೌಹಾಣ, ವಿದ್ಯಾರ್ಥಿ ಮುಖಂಡರಾದ ರಾಜೇಶ ಗುರಾಣಿ, ಮಂಜುನಾಥ ಜಾಲಗಾರ, ನಬಿ ನದಾಫ್ ಇದ್ದರು. ಸಿಪಿಐ ಐ.ಆರ್.ಪಟ್ಟಣಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.