ADVERTISEMENT

ಬಾಗಲಕೋಟೆ: ಕೇಂದ್ರ ಅಧ್ಯಯನ ತಂಡದಿಂದ ನೆರೆ, ಪ್ರವಾಹ ಹಾನಿ ವೀಕ್ಷಣೆ ಇಂದು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 3:19 IST
Last Updated 8 ಸೆಪ್ಟೆಂಬರ್ 2020, 3:19 IST

ಬಾಗಲಕೋಟೆ: ಬೆಂಗಳೂರಿನ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಎಂಜಿನಿಯರ್ ಸದಾನಂದ ಬಾಬು ಹಾಗೂ ಗ್ರಾಮೀಣಾಭಿವೃದ್ದಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜವೇದಿ ಅವರನ್ನೊಳಗೊಂಡ ಕೇಂದ್ರ ಅಧ್ಯಯನ ತಂಡ ಸೆಪ್ಟೆಂಬರ್ 8 ರಂದು ಜಿಲ್ಲೆಗೆ ಬಂದು ಪ್ರವಾಹದಿಂದ ಆದ ಹಾನಿ ವೀಕ್ಷಣೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬೆಳಿಗ್ಗೆ 12.30ಕ್ಕೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಗೋವಿನಕೊಪ್ಪ ಗ್ರಾಮಕ್ಕೆ ಬಂದು ಹಾನಿಗೊಳಗಾದ ಲೋಕೋಪಯೋಗಿ ಇಲಾಖೆಯ ರಸ್ತೆ ಮತ್ತು ಸೇತುವೆ, ಕೃಷಿ ಮತ್ತು ತೋಟಗಾರಿಕೆ ಬೆಳೆ ವೀಕ್ಷಿಸುವರು.

ನಂತರ ಹೆಬ್ಬಳ್ಳಿ ಗ್ರಾಮಕ್ಕೆ ಬರುವ ತಂಡ ಕೃಷಿ, ತೋಟಗಾರಿಕೆ ಬೆಳೆ ಹಾನಿ ಹಾಗೂ ಹಾನಿಗೊಳಗಾದ ಹೆಸ್ಕಾಂನ ಉದ್ಯುತ್ ಸಾಮಗ್ರಿ ಹಾಗೂ ಪಿಆರ್‍ಇಡಿ ರಸ್ತೆಗಳನ್ನು ವೀಕ್ಷಿಸಿ ಬಾದಾಮಿಗೆ ಬರಲಿದೆ.

ADVERTISEMENT

ಮಧ್ಯಾಹ್ನ 2.30ಕ್ಕೆ ಕಲಾದಗಿ ಗ್ರಾಮಕ್ಕೆ ಬಂದು ಹಾನಿಗೊಳಗಾದ ಈರುಳ್ಳಿ ಬೆಳೆ ವೀಕ್ಷಿಸುವರು. ನಂತರ ಚಿಚಖಂಡಿ ಸೇತುವೆ, ಹೆಸ್ಕಾಂ, ಇಂಗಳಗಿ ರಸ್ತೆ ಹಾನಿ ವೀಕ್ಷಣೆ ಮಾಡಲಿದ್ದಾರೆ.

ಮುಧೋಳದ ಯಾದವಾಡ ಸೇತುವೆ ಮತ್ತು ರಸ್ತೆ ಹಾನಿ, ಸಾವಳಗಿ ಗ್ರಾಮದ ಕೃಷಿ, ಹೆಸ್ಕಾಂ ಹಾನಿ ವೀಕ್ಷಿಸಿದ ತಂಡ ಸಂಜೆ 6.15ಕ್ಕೆ ಧಾರವಾಡಕ್ಕೆ ಪ್ರಯಾಣ ಬೆಳೆಸಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನೆರೆ ಮತ್ತು ಪ್ರವಾಹದಿಂದ ಅಂದಾಜು ₹857.35 ಕೋಟಿಯಷ್ಟು ಹಾನಿಯಾಗಿದೆ. ಹೆಚ್ಚಿನ ಪರಿಹಾರಕ್ಕೆ ಕೇಂದ್ರ ತಂಡಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಸ್ತುವಾರಿ ಕಾರ್ಯದರ್ಶಿ ಕಳಸದ ಜಿಲ್ಲೆಗೆ ಇಂದು

ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಸೆಪ್ಟೆಂಬರ್ 8 ರಂದು ಕೇಂದ್ರ ಅಧ್ಯಯನ ತಂಡದೊಂದಿಗೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 1.45ಕ್ಕೆ ಬಾದಾಮಿಗೆ ಬಂದು ಕೇಂದ್ರ ಅಧ್ಯಯನ ತಂಡದೊಂದಿಗೆ ಚರ್ಚೆ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳುವರು.

ಸಂಜೆ 6ಕ್ಕೆ ಮುಧೋಳಕ್ಕೆ ಬಂದು ಕೇಂದ್ರ ಅಧ್ಯಯನ ತಂಡದೊಂದಿಗೆ ಚರ್ಚೆ ನಡೆಸಿ ಮುಧೋಳದಿಂದ ನಿರ್ಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪೋಷನ್ ಮಾಸಾಚರಣೆ, ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಇಂದು

ಬಾಗಲಕೋಟೆ: ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಸೆಪ್ಟೆಂಬರ್ 8 ರಂದು ರಾಷ್ಟ್ರೀಯ ಪೋಷಣ್ ಮಾಸಾಚರಣೆ, ಮತ್ತು ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮತ್ತು ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಶಂಸನಾ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10 ಗಂಟೆಗೆ ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೀರಣ್ಣ ಚರಂತಿಮಠ ವಹಿಸಲಿದ್ದು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಸಿ.ಶಿವಲಿಂಗಪ್ಪ, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ವೈ.ಬಸರಿಗಿಡದ ಆಗಮಿಸಲಿದ್ದಾರೆ ಎಂದು ಬಾಗಲಕೋಟೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಇಂದು

ಬಾಗಲಕೋಟೆ: ಜಿಲ್ಲಾಡಳಿತದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರಿಂದ ಸಾಕ್ಷರತಾ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.