ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ: ಈಶ್ವರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:09 IST
Last Updated 4 ಡಿಸೆಂಬರ್ 2025, 4:09 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಈ ಎರಡೂವರೆ ವರ್ಷಗಳಲ್ಲಿ ಸರ್ಕಾರ ಇದೆ ಎಂದು ಗೊತ್ತಾಗಿಲ್ಲ. ಈಗಲಾದರೂ ಜಗಳಬಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ, ಡಿಸಿಎಂ ನಾಟಿಕೋಳಿ ಊಟದ ಬಳಿಕವೂ ಕಿತ್ತಾಟ ನಿಲ್ಲುವುದಿಲ್ಲ. ಬ್ರೇಕ್‌ ಫಾಸ್ಟ್‌ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸುವುದು ಬಿಟ್ಟು, ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುತ್ತಾ ಕುಳಿತಿದ್ದಾರೆ. ರಾಜ್ಯದ ಜನರ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಟೀಕಿಸಿದರು.

ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮಾಗಾಂಧೀಜಿ ಹೇಳಿದ್ದರು. ಅದಕ್ಕೆ ಆಗ ಕಾಂಗ್ರೆಸ್‍ನವರು ಒಪ್ಪಿರಲಿಲ್ಲ. ಈಗ ದೇಶದ ಜನರು ಗಾಂಧೀಜಿ ಕನಸು ನನಸು ಮಾಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋಲಿಸುತ್ತಿದ್ದಾರೆ. ಈ ಸರ್ಕಾರ ಇರುತ್ತದೆಯೋ, ಇಲ್ಲವೋ. ಸಿದ್ದರಾಂಯ್ಯ ಇರುತ್ತಾರೋ, ಬೇರೆಯವರು ಬರುತ್ತಾರೋ ಎಂಬ ಬಗ್ಗೆ ಚರ್ಚೆ ಮಾಡಲ್ಲ. ರಾಜ್ಯದಲ್ಲಿಯೂ ಕಾಂಗ್ರೆಸ್‌ ನಿರ್ನಾಮವಾಗಲಿದೆ ಎಂದರು.

ADVERTISEMENT

ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಕಾರ ಕೊಡಲ್ಲ. ಡಿಕೆ ಶಿವಕುಮಾರ್ ಸಿಎಂ ಆದರೆ ಸಿದ್ದರಾಮಯ್ಯ ಸಹಕಾರ ಕೊಡಲ್ಲ. ಸರ್ಕಾರ ಬಿದ್ದು ಹೋಗುತ್ತದೆ. ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು ಎಂದು ಈಶ್ವರಪ್ಪ ಭವಿಷ್ಯ ನುಡಿದರು.

ಬಿಜೆಪಿಯಲ್ಲಿ ಈಶ್ವರಪ್ಪ, ವಿಜಯೇಂದ್ರ ಮುಖ್ಯವಲ್ಲ. ನಮ್ಮ ಮೇಲೆ ಬಿಜೆಪಿ ನಿಂತಿಲ್ಲ. ನಿಷ್ಠಾವಂತ ಕಾರ್ಯಕರ್ತರ ಮೇಲೆ ಪಕ್ಷ ನಿಂತಿದೆ. ನಮ್ಮಲ್ಲಿ ಸರ್ವಾಧಿಕಾರ ಇಲ್ಲ. ಬಿಜೆಪಿ ಸರಿ ಹೋಗಬೇಕು ಎನ್ನುವದೇ ನನ್ನ ಹಾಗೂ ಬಸನಗೌಡ ಪಾಟೀಲ ಯತ್ನಾಳರ ಆಶಯ. ರಾಜ್ಯದಲ್ಲಿ ಕಾಂಗ್ರೆಸ್ ಹೋಗಬೇಕು. ರಾಜ್ಯ ಉಳಿಯಬೇಕು‘ ಎಂದು ಹೇಳಿದರು.

ಬಿಜೆಪಿ ಬೆಳೆವಣಿಗೆ ಬಗ್ಗೆ ಇವತ್ತು ಮಾತನಾಡಲ್ಲ: ಬಿಜೆಪಿ ರೆಬಲ್ ಶಾಸಕರು ದೆಹಲಿಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ಬಿಜೆಪಿಯಲ್ಲಿ ಏನಾಗುತ್ತದೆ ಎಂದು ಇವತ್ತು ಹೇಳಲು ಇಷ್ಟಪಡಲ್ಲ. ಅಲ್ಲಿ ಏನೇ ವಿರೋಧ ಇದ್ದರೂ ಇದನ್ನು ಸುಧಾರಿಸಿ ಸರಿಮಾಡುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಷಾ ಕೇಂದ್ರ ನಾಯಕರಿಗೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.