ಮಹಾಲಿಂಗಪುರ: ಅಡುಗೆ ಅನಿಲ ಸಿಲಿಂಡರ್, ದಿನಸಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಸಾರ್ವಜನಿಕ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಬಡವರು, ಮಧ್ಯಮ ವರ್ಗದ ಜನರು ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಸಮೀಪದ ಸಮೀರವಾಡಿಯ ಕಬ್ಬು ಬೆಳೆಗಾರರ ಸಂಘದ ರೈತಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ತೇರದಾಳ ಕ್ಷೇತ್ರದ ಸೈದಾಪುರ- ಸಮೀರವಾಡಿ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರು, ಮುಖಂಡರು ಹಾಗೂ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು, ರೈತರು, ಜನಸಾಮಾನ್ಯರು ಗೋಳಾಡುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ. ದೇಶದಲ್ಲಿ ತಲೆದೋರಿರುವ ಈ ಸಂಕಷ್ಟವನ್ನು ದೂರ ಮಾಡಲು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟನೆಗೆ ಹಾಗೂ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಬಿಜೆಪಿ ಬೊಗಳೆ ಬಿಡುತ್ತಾ ಜಾತಿ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಆಡಳಿತ ನಡೆಸುತ್ತಿದೆಯೇ ಹೊರತು, ಜನಪರ ಕಾಳಜಿ ಮೆರೆದಿಲ್ಲ. ಕಾಂಗ್ರೆಸ್ ಸರ್ಕಾರ ಸರ್ವ ಧರ್ಮೀಯರ ಹಕ್ಕು ಬಾದ್ಯತೆಗಳನ್ನು ಎತ್ತಿಹಿಡಿಯುವ ಮೂಲಕ ದೇಶದಲ್ಲಿ ಒಳ್ಳೆಯ ಆಡಳಿತ ನಡೆಸಿದೆ ಎಂದರು.
ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದರು. ಡಾ.ಎ.ಆರ್. ಬೆಳಗಲಿ, ಸಿದ್ದು ಕೊಣ್ಣೂರ, ಮಲ್ಲಪ್ಪ ಸಿಂಗಾಡಿ, ಕಾಶಿನಾಥ ಹುಡೇದ, ಎಚ್.ಎಸ್.ತೆಗ್ಗಳ್ಳಿ, ಲಕ್ಷ್ಮಣ ದೇಸಾರಟ್ಟಿ, ರಂಗನಗೌಡ ಪಾಟೀಲ, ಬಸವರಾಜ ಪೂಜೇರಿ, ಪರಮಾನಂದ ಪುಡರಡ್ಡಿ, ಮಲ್ಲಪ್ಪ ಗೌಂಡಿ, ಎಚ್.ಎಸ್.ಭಜಂತ್ರಿ, ಲಕ್ಕಪ್ಪ ಸವಸುದ್ದಿ, ಬಸವರಾಜ ರಾಯರ, ಪ್ರಕಾಶ ಮಮದಾಪುರ, ಪಿಯೂಸ ಓಸ್ವಾಲ, ಅಣ್ಣೇಶಗೌಡ ಉಳ್ಳಾಗಡ್ಡಿ, ವಿಠ್ಠಲ ಹೊಸಮನಿ, ಅಯೂಬ ಅಥಣಿ, ಪ್ರಭು ತಂಬೂರಿ, ದುಂಡಪ್ಪ ಪಟ್ಟಣಶೆಟ್ಟಿ, ಮಹಮ್ಮದ ಹುಲಿಕಟ್ಟಿ, ಬಸು ಮಾಂಗ, ಅಶೋಕ ಉಳ್ಳಾಗಡ್ಡಿ, ಸಿದ್ರಾಮ ಯರಗಟ್ಟಿ, ಶಿವಾಜಿ ದಡ್ಡಿಮನಿ, ರೂಪಾಲಿ ಸಿಂಧೆ, ಮೆಹಬೂಬ ನದಾಫ, ರಾಜು ನದಾಫ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.