ADVERTISEMENT

ಗಿಡ ಕಡಿದ ಗುತ್ತಿಗೆದಾರನಿಗೆ ₹10 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:23 IST
Last Updated 18 ಜೂನ್ 2021, 17:23 IST

ಬಾದಾಮಿ: ರಸ್ತೆ ಪಕ್ಕದಲ್ಲಿದ್ದ ಗಿಡಗಳನ್ನು ಉರುಳಿಸಿದ ಗುತ್ತಿಗೆದಾರನಿಗೆ ₹ 10 ಸಾವಿರ ದಂಡ ವಿಧಿಸಲಾಗಿದೆ. ಇಲ್ಲಿ ಮತ್ತೆ ಗಿಡಗಳನ್ನು ನೆಡಲು ತಿಳಿಸಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಪಿ.ಎಸ್. ಖೇಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಟಕನಕೇರಿ ಗ್ರಾಮದ ಸಮೀಪ ರಾಜ್ಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಬಾದಾಮಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆಯ ಕಾಮಗಾರಿಯಲ್ಲಿ ಗುತ್ತಿಗೆದಾರ ರಸ್ತೆ ಪಕ್ಕದ ಗಿಡಗಳ ಮರಗಳ ಮಾರಣ ಹೋಮದ ಬಗ್ಗೆ ‘ಪ್ರಜಾವಾಣಿ’ ಜೂನ್‌ 11ರಂದು ವರದಿ ಪ್ರಕಟಿಸಿತ್ತು.

ಪತ್ರಿಕಾ ವರದಿಗೆ ಸ್ಪಂದಿಸಿದ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ವಿಠ್ಠಲ ಹಾಡಲಗೇರಿ ಮತ್ತು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಪಿ.ಎಸ್. ಖೇಡಗಿ ಸ್ಥಳಕ್ಕೆ ಭೇಟಿ ನೀಡಿ ಗಿಡಗಳನ್ನು ಹಾನಿ ಮಾಡಿದ ಬಗ್ಗೆ ಪರಿಶೀಲಿಸಿ ದಂಡ ವಿಧಿಸಿದ್ದಾರೆ.

ADVERTISEMENT

ಸಾಮಾಜಿಕ ಅರಣ್ಯ ಇಲಾಖೆ ಮೂರು ವರ್ಷಗಳ ಹಿಂದೆ ಕುಟಕ ನಕೇರಿ- ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಅಂದಾಜು 2 ಕಿ.ಮೀ. ವರೆಗೆ ನೂರಕ್ಕೂ ಅಧಿಕ ಬೇವು, ಅರಳಿ, ಬಸರಿ, ಸಂಕೇಶ್ವರ ಗಿಡಗಳನ್ನು ನೆಡಲಾಗಿತ್ತು. ಪ್ರಾದೇಶಿಕ ಅರಣ್ಯ ಇಲಾಖೆ ಅವುಗಳನ್ನು ಸಂರಕ್ಷಿಸಿತ್ತು. ಇಲ್ಲಿ 30 ಕ್ಕೂ ಅಧಿಕ ಗಿಡಗಳನ್ನು ಉರುಳಿಸಲಾಗಿದೆ ಎಂದು ತಿಳಿದಿದೆ.

ಗುತ್ತಿಗೆದಾರ ರಸ್ತೆ ಬದಿ ಗಿಡಗಳನ್ನು ತೆಗೆಯುವ ಮುನ್ನ ಅರಣ್ಯ ಇಲಾಖೆಗೆ ತಿಳಿಸದೆ ಜೆಸಿಬಿ ಮೂಲಕ ಗಿಡಗಳ ಹಾನಿ ಮಾಡಿದ ಬಗ್ಗೆ ಸ್ಥಳೀಯ ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್.ವಾಸನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು.

ಮರಗಳ ದೂರದಿಂದ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.