ಬಾದಾಮಿ: 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ (ಪ್ರತ್ಯೇಕ ವಾಸ) ಇರುವಂತೆ ಸೂಚಿಸಿದ್ದರೂ ಅದನ್ನು ಉಲ್ಲಂಘಿಸಿ ಅಡ್ಡಾಡುತ್ತಿದ್ದ ಯುವಕನಿಗೆ ಗುರುವಾರ ತಾಲ್ಲೂಕು ಆಡಳಿತ ಒಂದು ಗಂಟೆ ಸುಡು ಬಿಸಿಲಿನಲ್ಲಿ ಬರಿ ಮೈಯಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದೆ.
ಕೋಲ್ಕತ್ತಾದಿಂದ ಮಾರ್ಚ್ 22ರಂದು ಬಾದಾಮಿಗೆ ಮರಳಿದ್ದ ಯುವಕನಿಗೆ ವಿಮಾನ ನಿಲ್ದಾಣದಲ್ಲಿ ಕೈಗೆ ಮುದ್ರೆ ಹಾಕಲಾಗಿತ್ತು. ಜೊತೆಗೆ ಪ್ರತ್ಯೇಕವಾಗಿ ಇರುವಂತೆ ಹೇಳಲಾಗಿತ್ತು. ಆದರೆ ಮನೆಯಲ್ಲಿ ಉಳಿಯದ ಯುವಕ ಸ್ನೇಹಿತರ ಜೊತೆ ಹೊರಗೆ ತಿರುಗಾಟ ನಡೆಸಿದ್ದನು. ಸಾಲದ್ದಕ್ಕೆ ಕೈ ಮೇಲೆ ಹಾಕಿದ್ದ ಮುದ್ರೆ ಅಳಿಸಿ ಹಾಕಲು ಪ್ರಯತ್ನಿಸಿದ್ದನು.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಯುವಕನನ್ನು ಕರೆಸಿದ ತಹಶೀಲ್ದಾರ್ ಸುಹಾಸ್ ಇಂಗಳೆ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ರಮೇಶ ಹಾನಾಪುರ ಇಲ್ಲಿನ ಪೊಲೀಸ್ ಠಾಣೆ ಎದುರು ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದರು. ಕ್ವಾರಂಟೈನ್ ಅವಧಿ ಮುಗಿಯುವರೆಗೂ ಮನೆಯಲ್ಲಿಯೇ ಇರಬೇಕು ಎಂದು ತಾಕೀತು ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.