ಇಳಕಲ್: ‘ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ಶರಣಾಗುವಂತೆ ಮಾಡಿದ್ದು ಪ್ರಧಾನಿ ಮೋದಿ. ಅವರು ಸರೆಂಡರ್ ಆಗಿದ್ದಾರೆ ಎಂಬ ಕಾಂಗ್ರೆಸ್ ಟೀಕೆಯಲ್ಲಿ ಅರ್ಥವಿಲ್ಲ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಪೂರೈಸಿದ ಅಂಗವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ, ಹಿತೈಷಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಭಾರತದ ಅಭಿವೃದ್ಧಿ, ರಕ್ಷಣೆ ಹಾಗೂ ಗೌರವ ವೃದ್ಧಿಯು ಪ್ರಧಾನಿ ಮೋದಿ ಅವರಿಂದ ಮಾತ್ರ ಸಾಧ್ಯ. ಅವರ 11 ವರ್ಷದ ಆಳ್ವಿಕೆಯಲ್ಲಿ ಭಾರತವು ವಿಶ್ವದ ಪ್ರಮುಖ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ’ ಎಂದರು.
‘ಇಲ್ಲಿಯ ಶಾಸಕರು, ತೊಂಡಿಹಾಳ, ದಾಸಬಾಳ ಹತ್ತಿರ ಹೋದರೆ ಅಕ್ರಮ ಮರಳು ಸಾಗಣೆ ಕಾಣಬಹುದು. ಇಳಕಲ್ ಡಿಪೊ ಹಿಂಭಾಗದಲ್ಲಿ ಜೂಜು ಅಡ್ಡಯನ್ನೂ ನೋಡಬಹುದು. ಆದರೆ, ಯಾವ ಅಕ್ರಮಗಳೂ ನಡೆಯುತ್ತಿಲ್ಲ ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.
‘ಕಂದಗಲ್ ರಸ್ತೆಯ ನೇಕಾರ ಕಾಲೊನಿ, ಹೆದ್ದಾರಿ ಪಕ್ಕದ 500 ಮನೆಗಳನ್ನು ಯಾರು ಕಟ್ಟಿದ್ದು ಎಂದು ಕೇಳಿದರೆ, ಅಲ್ಲಿಯ ನಿವಾಸಿಗಳೇ ನಿಜ ಹೇಳುತ್ತಾರೆ. ಎಲ್ಲವನ್ನೂ ನಾನೇ ಮಾಡಿದ್ದು ಎಂಬುದಾಗಿ ಹೇಳಿಕೊಳ್ಳುವುದು ಶಾಸಕರಿಗೆ ಅಭ್ಯಾಸವಾಗಿದೆ’ ಎಂದರು.
ಪಕ್ಷದ ಜಿಲ್ಲಾ ಸಹ ಸಂಚಾಲಕ ಬಸವರಾಜ, ಮಹಾಂತಗೌಡ ತೊಂಡಿಹಾಳ, ಅರವಿಂದ ಮಂಗಳೂರ, ಮಲ್ಲಿಕಾರ್ಜುನ ಗಡಿಯಣ್ಣವರ, ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮೂಗನುರಮಠ, ಮಹಾಂತೇಶ ಕಡಪಟ್ಟಿˌ ಸುಗೂರೇಶ ನಾಗಲೋಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.