ADVERTISEMENT

ಹಿಂದೂಗಳ ಮೇಲಿನ ಹಲ್ಲೆಗೆ ಖಂಡನೆ

ಹಿಂದೂ ಜಾಗರಣಾ ವೇದಿಕೆಯಲ್ಲಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 16:24 IST
Last Updated 23 ಜೂನ್ 2023, 16:24 IST
ಹಿಂದೂಗಳ ಮೇಲೆ ನಡೆಯುವ ಹಲ್ಲೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಘಟನೆಯ ಮಾತೃಸುರಕ್ಷಾ ವಿಭಾಗದ ಪ್ರಾಂತ ಸಂಯೋಜಕ ಶ್ರೀಕಾಂತ ಹೊಸಕೆರೆ ಮಾತನಾಡಿದರು
ಹಿಂದೂಗಳ ಮೇಲೆ ನಡೆಯುವ ಹಲ್ಲೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಘಟನೆಯ ಮಾತೃಸುರಕ್ಷಾ ವಿಭಾಗದ ಪ್ರಾಂತ ಸಂಯೋಜಕ ಶ್ರೀಕಾಂತ ಹೊಸಕೆರೆ ಮಾತನಾಡಿದರು   

ಬಾಗಲಕೋಟೆ: ಹಿಂದೂಗಳ ಮೇಲೆ ಹಲ್ಲೆ ನಿರಂತರ ಹಲ್ಲೆ ನಡೆಸುತ್ತಿರುವ ಇಸ್ಲಾಮಿಕ್‌ ಜಿಹಾದಿ ಗ್ಯಾಂಗ್‌–46 ಅನ್ನು ನಿಯಂತ್ರಿಸಬೇಕು. ಭಯೋತ್ಪಾದಕ ಕೃತ್ಯಗಳ ಕುರಿತು ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌.ಐ.ಎ) ವಹಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ನಗರದ ಎಲ್‌.ಐ.ಸಿ. ವೃತ್ತದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿ, ಹಿಂದೂಗಳ ಮೇಲೆ ಆಗಾಗ ನಡೆಯುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ರಾಜ್ಯ ಸರ್ಕಾರ ಸರಿಯಾದ ಕ್ರಮಕೈಗೊಳ್ಳದಿದ್ದರೆ, ಮುಂದಿನ ಅನಾಹುತದ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ಯಾಂಗ್‌–46 ಸಾಮಾಜಿಕ ಜಾಲತಾಣದಲ್ಲಿ ಗ್ಯಾಂಗ್‌ ಪ್ರಚಾರದ ಹಾಗೂ ಮಾರಕಾಸ್ತ್ರಗಳನ್ನು ಹಿಡಿದ ವಿಡಿಯೊಗಳು ಹರಿದಾಡುತ್ತಿವೆ. ಇದು ಪೊಲೀಸ್‌ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಅಂತಹದೊಂದು ಗ್ಯಾಂಗೇ ಇಲ್ಲ ಎಂದು ಹೇಳುವ ಮೂಲಕ ಎಲ್ಲವನ್ನೂ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ಸೆಕ್ಟರ್‌ ನಂ. 49 ರಲ್ಲಿ ಹಿಂದೂ ಕಾರ್ಯಕರ್ತನ ಮನೆ ಹಾಗೂ ವಾಂಬೆ ಕಾಲೊನಿಯ ಲಕ್ಷ್ಮೀ ದೇವಸ್ಥಾನದ ಮೇಲೆ ಕಲ್ಲು ತೂರಾಟದ ನಡೆಸಿದ ಗ್ಯಾಂಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಆಗ್ರಹಿಸಿದರೆ, ಎರಡೂ ಕಡೆಯ ಕೆಲವರನ್ನು ಬಂಧಿಸಿ ಕಣ್ಣೊರೆಸುವ ತಂತ್ರ ಮಾಡಿದೆ ಎಂದು ದೂರಿದರು.

ವೇದಿಕೆ ಉತ್ತರ ಪ್ರಾಂತ ಯುವ ವಾಹಿನಿ ಪ್ರಮುಖ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಎಸ್‍ಪಿ, ಡಿಎಸ್‍ಪಿ ಹೊಸದಾಗಿ ಬಂದಾಗಲೂ 46 ಗ್ಯಾಂಗ್ ಬಗ್ಗೆ ಮಾಹಿತಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಗರದ ಎಪಿಎಂಸಿ ಶುಕ್ರವಾರ ಬಂದ್ ಆಗುತ್ತಿದೆ ಎಂದು ದೂರಿದರು.

ಸಂಘಟನೆಯ ಮಾತೃಸುರಕ್ಷಾ ವಿಭಾಗದ ಪ್ರಾಂತ ಸಂಯೋಜಕ ಶ್ರೀಕಾಂತ ಹೊಸಕೆರೆ ಮಾತನಾಡಿ, ಹಿಂದೂ ಸಮಾಜ ಘಜನಿ, ಟಿಪ್ಪು, ಔರಂಗಜೇಬರಂಥವರು ಬಂದಾಗಲೇ ಹೆದರಿಲ್ಲ. ಈಗಿನ ಮತಾಂಧರಿಗೂ ಜಗ್ಗುವ ಪ್ರಶ್ನೆಯಿಲ್ಲ. ವಾರದೊಳಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಹೇಗೆ ಉತ್ತರ ಕೊಡಬೇಕು ಎಂದು ಗೊತ್ತಿದೆ ಎಂದರು.
ಜಿಲ್ಲಾ ಸಂಘಚಾಲಕ ಸಿ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಭಾಂಡಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.