ಬಾಗಲಕೋಟೆ: ‘ರಾಜ್ಯದಲ್ಲಿನ ಬರಪರಿಸ್ಥಿತಿ ಹಾಗೂ ಅನ್ನದಾತರ ಸಂಕಷ್ಟದ ಬಗ್ಗೆ ಶೀಘ್ರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದಲೇ ಬೇರುಮಟ್ಟದ ಅಧ್ಯಯನ ನಡೆಸಿ ಅದರ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ ಭೀಕರ ಬರಗಾಲವಿದೆ. 156 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಜನರ ಸಂಕಷ್ಟಕ್ಕೆ ದನಿಯಾಗಬೇಕಿದ್ದ ಸಮ್ಮಿಶ್ರ ಸರ್ಕಾರ,ಅಧಿಕಾರ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.ವಿರೋಧ ಪಕ್ಷ ಬಿಜೆಪಿ ಅಧಿಕಾರ ಹಿಡಿಯಲು ಹೊಂಚು ಹಾಕುತ್ತಿದ್ದೆ. ಒಟ್ಟಾರೆ ಸರ್ಕಾರ ಸತ್ತು ಹೋಗಿದ್ದರೆ, ವಿರೋಧ ಪಕ್ಷ ಕೋಮಾ ಸ್ಥಿತಿಯಲ್ಲಿದೆ’ ಎಂದು ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಜಿಂದಾಲ್ ಕಂಪೆನಿಗೆ ಭೂಮಿ ನೀಡಿದರೆ, ರೈತ ಸಂಘ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ ನಾಗೇಂದ್ರ, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು, ಜಿಂದಾಲ್ ಕಂಪೆನಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಭೂಮಿ ನೀಡಬೇಡಿ ಎಂದುಬಿಜೆಪಿ ನಡೆಸುತ್ತಿರುವ ಹೋರಾಟ ಡೋಂಗಿ’ ಎಂದು ಟೀಕಿಸಿದರು.
ಮುಖ್ಯಮಂತ್ರಿಗೆ ಘೋರಾವ್
‘ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಬಿಲ್ ಬಾಕಿ ಕೊಡಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಬರಲಿ. ಇಲ್ಲದಿದ್ದರೆ ಅವರು ಹಳ್ಳಿಗೆ ಬಂದಾಗ ಘೇರಾವ್ ಹಾಕುವುದು ನಿಶ್ಚಿತ’ ಎಂದು ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಕೆ.ಜಿ.ಶಾಂತಸ್ವಾಮಿಮಠ ಎಚ್ಚರಿಸಿದರು.
‘ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ವಿಷಯದಲ್ಲಿ ಹುಡುಗಾಟವಾಡುತ್ತಿದ್ದಾರೆ. ಅವರಿಗೆ ಬದ್ಧತೆ ಇದ್ದಲ್ಲಿ ಸಾಲಮನ್ನಾ ಅನುಷ್ಠಾನದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.