ಗುಳೇದಗುಡ್ಡ: ತಾಲ್ಲೂಕಿನ ಕೋಟೇಕಲ್ ಗ್ರಾಮದಿಂದ ಗುಳೇದಗುಡ್ಡ ಪಟ್ಟಣದ ಗುಲಾಬ ಟಾಕೀಜ್ ವರೆಗೆ ರಾಜ್ಯ ಹೆದ್ದಾರಿ ನಿರ್ಮಾಣವಾಗಿದ್ದು, ಹೆದ್ದಾರಿ ತುಂಬ ಉಸುಕು ಮಣ್ಣು ಬಿದ್ದಿದ್ದು ನಿತ್ಯ ರಸ್ತೆ ಮೇಲೆ ವಾಹನ ದಟ್ಟಣೆ ಸಂಚಾರ ಇರುವುದರಿಂದ ರಸ್ತೆ ಪಕ್ಕ ಇರುವ ವ್ಯಾಪಾರ ಮಳಿಗೆಯವರಿಗೆ ಬೈಕ್ ಸವಾರರಿಗೆ ಸಂಚರಿಸುವ ವಾಹನದ ದೂಳಿನಿಂದ ತೀವ್ರ ತೊಂದರೆಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಪಟ್ಟಣದ ನಾಗರಿಕರಾದ ಶಂಕರ ಜಿಗಳೂರ ಹಾಗೂ ವಿ.ಕೆ.ಬದಿ ಹೇಳಿದರು.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಮೇಲೆ ಬಿದ್ದಿರುವ ಉಸುಕು ಹಾಗೂ ಮಣ್ಣನ್ನು ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತದವರು ತೆಗೆಸಬೇಕು ಇಲ್ಲದಿದ್ದರೆ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮಹಿಳೆಯರು, ಮಕ್ಕಳು ಮಾರ್ಕೆಟ್ ಮುಂತಾದ ಕೆಲಸಗಳಿಗೆ ತೆರಳುವಾಗ ದೂಳು ಮೈಮೇಲೆ ಆವರಿಸುತ್ತದೆ. ಇಲ್ಲಿನ ಪವಾರ ಕ್ರಾಸ್ ನಿಂದ ಬಾಗಲಕೋಟೆ ರಸ್ತೆ ಹೆಚ್ಚು ಮಣ್ಣಿನಿಂದ ಕೂಡಿದ್ದು ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಅವರನ್ನು ಸಂಪರ್ಕಿಸಿದಾಗ, ‘ರಸ್ತೆಯ ಮೇಲಿನ ಮಣ್ಣು ಹಾಗೂ ಉಸುಕು ತೆಗೆದು ದೂಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಿಡಬ್ಲೂಡಿಯವರಿಗೆ ಇರುತ್ತದೆ. ಆದರೆ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಸದ್ಯದಲ್ಲಿಯೇ ಪುರಸಭೆ ಸಿಬ್ಬಂದಿಯಿಂದ ರಸ್ತೆ ಮೇಲಿನ ಮಣ್ಣನ್ನು ತೆರವುಗೊಳಿಸಲಾಗುವುದು’ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.