ಕುಳಗೇರಿ ಕ್ರಾಸ್ (ಬಾಗಲಕೋಟೆ ಜಿಲ್ಲೆ): ವರನ ಎತ್ತರ ಮೂರಡಿ ಮೂರಿಂಚು; ವಧುವಿನೆತ್ತರ ಐದಡಿ ಒಂಬತ್ತಿಂಚು. ಬಾದಾಮಿ ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿ ಭಾನುವಾರ ಸಂಭ್ರಮದಿಂದ ನಡೆದ ಮದುವೆಯಲ್ಲಿ ಈ ವಿಶೇಷ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವರ ನೀಲಗುಂದ ಗ್ರಾಮದ ಮಹಾದೇವಪ್ಪ ಕುಂಬಾರ ಹಾಗೂ ಶಾಂತವ್ವ ದಂಪತಿಯ ಪುತ್ರ ಬಸವರಾಜ. ವಧು ವಿಜಯಪುರ ಜಿಲ್ಲೆಯ ಗಣಿ ಗ್ರಾಮದ ಮಲ್ಲಪ್ಪ ಹಾಗೂ ಬಂಗಾರೆವ್ವ ಕುಂಬಾರ ದಂಪತಿಯ ಏಳನೇ ಪುತ್ರಿ ರುಕ್ಮಿಣಿ.
ನೀಲಗುಂದ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿ ಪಾನ್ಶಾಪ್ ನಡೆಸುತ್ತಿರುವ ಬಸವರಾಜ ಏಳೆಂಟು ವರ್ಷಗಳಿಂದ ಕನ್ಯಾನ್ವೇಷಣೆಯಲ್ಲಿದ್ದರು. ಗಣಿ ಗ್ರಾಮದ ರುಕ್ಮಿಣಿ ಸಂಗಾತಿಯಾಗಿ ಸಿಕ್ಕರು. ಸಮಾಜದ ಗುರು ಹಿರಿಯರ ಸಮ್ಮುಖದಲ್ಲಿ ಭಾನುವಾರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ವಧು–ವರರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟರು.
ವಧುವಿಗೆ ದೃಷ್ಟಿದೋಷವಿದೆ. ಮಗನಿಗೆ ಸಂಗಾತಿಯಾಗಿ ಸಿಕ್ಕಳಲ್ಲ ಎಂದು ಬಸವರಾಜನ ತಾಯಿಶಾಂತವ್ವ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.