ಬಾಗಲಕೋಟೆ: ಮೌಲ್ಯಾಧಾರಿತ ಶಿಕ್ಷಣ, ಗ್ರಾಮೀಣ ಆರೋಗ್ಯ ಸೇವೆ, ವಿದ್ಯಾರ್ಥಿ ಮತ್ತು ಸಿಬ್ಬಂದಿ ವಿನಿಮಯ ಕಾರ್ಯಕ್ರಮಗಳಿಗೆ ಬಿವಿವಿ ಸಂಘ ಹಾಗೂ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಡುವೆ ಗುರುವಾರ ಒಪ್ಪಂದ ಮಾಡಿಕೊಳ್ಳಲಾಯಿತು.
ಶೈಕ್ಷಣಿಕ ಯೋಜನೆಗಳ ಜೊತೆಗೆ ವೇದ ಅಧ್ಯಯನ, ಪ್ರದರ್ಶನ ಕಲೆಗಳಿಗೆ ಉತ್ತೇಜನ, ಮಾನವೀಯ ಮೌಲ್ಯಗಳ ಕುರಿತ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯ ನಡೆಯಲಿದೆ. ಆ ಮೂಲಕ ಸಮಗ್ರಮ ಶಿಕ್ಷಣ ಹಾಗೂ ಸಮುದಾಯ ಶಕ್ತೀಕರಣ ಉತ್ತೇಜಿಸಲು ಉದ್ದೇಶಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಸತ್ಯಸಾಯಿ ಬಾಬಾರವರ 100ನೇ ಜನ್ಮ ದಿನ ಅಂಗವಾಗಿ ನಡೆಯುತ್ತಿರುವ ವಿಶ್ವ ಸಾಂಸ್ಕೃತಿಕ ಮಹೋತ್ಸವದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಭಾಗಿಯಾಗಿ 'ವಸುಧೈವ ಕುಟುಂಬಕಂ' ಸಂದೇಶ ಸಾರುವ ಪ್ರಚಾರಕರಾಗಿ ಸೇರಿಕೊಂಡರು.
ವಿಶ್ವವಿದ್ಯಾಲಯದ ಸ್ಥಾಪಕ ಕುಲಾಧಿಪತಿ ಮಧುಸೂದನ ಸಾಯಿ ಶ್ರೀ, ಉಪ ಕುಲಪತಿ ಶ್ರೀಕಂಠಮೂರ್ತಿ, ಸತ್ಯ ಸಾಯಿ ಲೋಕ ಸೇವಾ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ನರಸಿಂಹ ಮೂರ್ತಿ, ಟಿ.ಬಿ. ಜಯಚಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.