ಬಾಗಲಕೋಟೆ: ’ಕೊರೊನಾ ಸಂಕಷ್ಟದ ಕಾಲದಲ್ಲೂ ಜಿಲ್ಲೆಯಲ್ಲಿ ಬಡವರ ನೋವಿಗೆ ಸರ್ಕಾರ ಸ್ಪಂದಿಸಿದೆ. ರೈತರು, ಆರ್ಥಿಕವಾಗಿ ದುರ್ಬಲರು, ಕಲಾವಿದರು, ಕಾಯಕ ವರ್ಗದವರಿಗೆ ಆರ್ಥಿಕ ನೆರವಿನ ಹಸ್ತ ಚಾಚಿ ತನ್ನ ಬದ್ಧತೆ ಮೆರೆದಿದೆ‘ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೊರೊನಾ ವೈರಸ್ ನಿಯಂತ್ರಣ ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ಕರ್ನಾಟಕ ಕೈಗೊಂಡ ಕ್ರಮ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕೊರೊನಾ ವಾರಿಯರ್ಸ್ಗಳಿಗೆ ಅರ್ಪಿಸೋಣ. ಅವರ ತ್ಯಾಗ ಹಾಗೂ ಹೋರಾಟ ಸ್ಮರಿಸೋಣ ಎಂದರು.
ಕೊರೊನಾ ಸೋಂಕಿತರಿಗೆ ನೆರವಾಗಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನದ 24 ಗಂಟೆ ಸಹಾಯವಾಣಿ ಆರಂಭಿಸಿ ಸಂಕಷ್ಟಕ್ಕೀಡಾದವರ ಕರೆಗಳನ್ನು ಸ್ವೀಕರಿಸಿ ಪರಿಹಾರ ಒದಗಿಸಲಾಗುತ್ತಿದೆ. ಕೋವಿಡ್ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ₹47.17 ಲಕ್ಷ, ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 92.17 ಲಕ್ಷ ನೆರವನ್ನು ಜಿಲ್ಲೆಯ ಜನತೆ ನೀಡಿದ್ದಾರೆ ಈ ನೆರವಿನ ಯಜ್ಞದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿಹಡಪದ ಅಪ್ಪಣ್ಣ, ಸವಿತಾ ಸಮಾಜದ 1180 ಕುಟುಂಬಗಳಿಗೆ ಆಹಾರದ ಕಿಟ್ಗಳ ವಿತರಿಸಲಾಗಿದೆ. 709 ಚಾಲಕರಿಗೆ ತಲಾ ₹5 ಸಾವಿರ ಪರಿಹಾರ ಪಾವತಿಸಲಾಗಿದೆ. 774 ಕಲಾವಿದರಿಗೆ ₹2 ಸಾವಿರ, ಮಡಿವಾಳ, ಸವಿತಾ ಸಮಾಜದವರಿಗೆ ₹5 ಸಾವಿರ ನೀಡಲಾಗುತ್ತಿದೆ. ರೈತರಿಂದ ಹಣ್ಣು ಮತ್ತು ತರಕಾರಿ ಖರೀದಿಸಲು ಬಾಗಲಕೋಟೆಯಲ್ಲಿ ಎರಡು, ಮುಧೋಳದಲ್ಲಿ ಒಂದು ಸೇರಿ ಒಟ್ಟು ಮೂರು ಹಾಪ್ಕಾಮ್ಸ್ ಮಳಿಗೆ ತೆರೆದು 35 ಟನ್ ಹಣ್ಣು, ತರಕಾರಿ ಖರೀದಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಸಿಇಒ ಟಿ.ಭೂಬಾಲನ, ಎಸ್ಪಿ ಲೋಕೇಶ ಜಗಲಾಸರ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.