ADVERTISEMENT

ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಬನ್ನಿ

ಜಾನಪದ ಪರಿಷತ್ ಬೀಳಗಿ ತಾಲ್ಲೂಕು ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 1:58 IST
Last Updated 29 ಮಾರ್ಚ್ 2022, 1:58 IST
ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದಲ್ಲಿನ ಬಿ.ಎನ್.ಖೋತ ಅಂತರರಾಷ್ಟ್ರೀಯ ಶಾಲೆಯಲ್ಲಿ  ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು
ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದಲ್ಲಿನ ಬಿ.ಎನ್.ಖೋತ ಅಂತರರಾಷ್ಟ್ರೀಯ ಶಾಲೆಯಲ್ಲಿ  ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು   

ಬೀಳಗಿ: ‘ಮೂಲ ಜಾನಪದ ಕಲಾವಿದರು ಸಂಕಷ್ಟದಲ್ಲಿದ್ದು, ನಿತ್ಯ ಜೀವನಕ್ಕೂ ಆಧಾರ ಇಲ್ಲದಂತಾಗಿದೆ. ಸರ್ಕಾರದ ನೆರವು ಅಗತ್ಯವಾಗಿದೆ ಎಂದು ಕನ್ನಡ ಜಾನಪದ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.

ತಾಲ್ಲೂಕಿನ ಅನಗವಾಡಿ ಗ್ರಾಮದಲ್ಲಿನ ಬಿ.ಎನ್.ಖೋತ ಅಂತರರಾಷ್ಟ್ರೀಯ ಶಾಲೆಯಲ್ಲಿ ಭಾನುವಾರ ನಡೆದ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇದುವರೆಗೂ ಜಾನಪದ ಕಲಾವಿದರ ಸಮೀಕ್ಷೆ ಆಗಿಲ್ಲ. ಸರ್ಕಾರ ಮುತುವರ್ಜಿವಹಿಸಿ ಜಾನಪದ ಕಲಾವಿದರ ಮಾಸಾಶನ ₹2000ದಿಂದ ₹5000ಕ್ಕೆ ಹೆಚ್ಚಿಸಬೇಕು ಎಂದರು.

ADVERTISEMENT

ಗೊರವರು, ತೊಗಲು ಗೊಂಬೆ ಆಟದ ಕಲಾವಿದರು ಸೇರಿದಂತೆ ಅಳಿವಂಚಿನಲ್ಲಿರುವ ಕಲೆಯನ್ನು ಉಳಿಸಿ ಪೋಷಿಸುವ ಕಾರ್ಯ ಅನಿವಾರ್ಯವಾಗಿದೆ. ಕಲೆಗಳು ಉಳಿದು, ಬೆಳೆಯಬೇಕಾದರೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಸರ್ಕಾರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಸಾಹಿತಿ ಡಿ.ಎಂ. ಸಾವಕಾರ ಅವರ ರಾಜಪಥ ಮತ್ತು ಹೊಸ ಹೆಜ್ಜೆ ಕೃತಿಗಳನ್ನು ಮಾಜಿ ಸಚಿವ ಎಸ್.ಆರ್. ಪಾಟೀಲ ಬಿಡುಗಡೆಗೊಳಿಸಿದರು. ಜಾನಪದವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಬೀಳಗಿ ನೆಲದಲ್ಲಿ ಸನಾದಿ ಅಪ್ಪಣ್ಣ, ಕಂದಗಲ್ಲ ಹಣಮಂತರಾಯ, ಕೃಷ್ಣಮೂರ್ತಿ ಪುರಾಣಿಕ್ ಅವರಂತಹ ಮಹನೀಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಎಂದರು.

ಸಾಹಿತಿ ರಾಜಶೇಖರ ಮಠಪತಿ (ರಾಗಂ) ಕೃತಿಗಳನ್ನು ಪರಿಚಯಿಸಿ ಸಾರಾಂಶ ವಿವರಿಸಿದರು. ಕುಂದರಗಿ ಚರಂತಿಮಠದ ವಿಶ್ವನಾಥ ದೇವರುಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಸವರಾಜ ಖೋತ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಬೀಳಗಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಆನಂದ ಜಡಿಮಠ ಅವರು ನೂತನ ಅಧ್ಯಕ್ಷ ಬಸವರಾಜ ದಾವಣಗೆರೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಸಿ.ಆರ್‌ ಸೋರಗಾಂವಿ, ಎಸ್.ಎಂ.ಕಟಗೇರಿ, ಆಶುಕವಿ ಸಿದ್ದಪ್ಪ ಬಿದರಿ, ಕಾಶಿನಾಥ ಸೋಮನಕಟ್ಟಿ, ಶ್ರೀಶೈಲ ಸೂಳಿಕೇರಿ, ವೀರೇಂದ್ರ, ಹಣಮಂತ ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.