ಬಾಗಲಕೋಟೆ: ಗ್ರಾಮ ಪಂಚಾಯ್ತಿ ಚುನಾವಣೆ ಎರಡನೇ ಹಂತದ ಮತದಾನ ಜಿಲ್ಲೆಯಲ್ಲಿ ಚುರುಕುಗೊಂಡಿದೆ. ಗುಳೇ ಹೋದವರು ಮತ ಹಾಕಲು ಊರುಗಳಿಗೆ ಬರುತ್ತಿದ್ದು, ಗ್ರಾಮೀಣ ಪರಿಸರ ಮತ್ತೆ ಜೀವ ಪಡೆದಿದೆ.
ಬಾಗಲಕೋಟೆ, ಬಾದಾಮಿ, ಹುನಗುಂದ, ಇಳಕಲ್ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ ಚುನಾವಣೆ ನಡೆದಿದ್ದು, ಗೋವಾ, ಬೆಂಗಳೂರು, ಮಂಗಳೂರು, ಮಹಾರಾಷ್ಟ್ರದ ರತ್ನಗಿರಿ ಜಿಲ್ಕೆಗೆ ದುಡಿಯಲು ಗುಳೇ ಹೋದವರನ್ನು ಮತ ಹಾಕಲು ವಿಶೇಷ ಬಸ್ ಗಳಲ್ಲಿ ಕರೆತರಲಾಗುತ್ತಿದೆ.
ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ,ತೆಗ್ಗಿ ಹಾಗೂ ತಿಮ್ಮಸಾಗರಕ್ಕೆ ಪ್ರಜಾವಾಣಿ ಭೇಟಿ ಕೊಟ್ಟಾಗ ಬೆಂಗಳೂರಿನಿಂದ ಒಂದು ಹಾಗೂ ಮಂಗಳೂರಿನಿಂದ ಎರಡು ಬಸ್ ಗಳಲ್ಲಿ ಗುಳೆ ಹೋದವರನ್ನು ಮತ ಹಾಕಲು ಕರೆತರಲಾಯಿತು.
400 ಮಂದಿ ಬರಲಿದ್ದಾರೆ: ತಿಮ್ಮ ಸಾಗರ ಗ್ರಾಮ ಬಹುತೇಕ ಖಾಲಿ ಇದ್ದು, ವೃದ್ಧರು ಹಾಗೂ ಮಕ್ಕಳು ಮಾತ್ರ ಊರಿನಲ್ಲಿದ್ದಾರೆ. ಚುನಾವಣೆಯಲ್ಲಿ ಮತ ಹಾಕಲು 200ಕ್ಕೂ ಹೆಚ್ಚು ಮಂದಿ ಬಂದಿದ್ದರು. ಬೆಂಗಳೂರಿನಿಂದ ಒಂದು ಬಸ್, ಮಂಗಳೂರಿನಿಂದ ಮೂರು ಬಸ್ ಗಳು ಮತದಾರರನ್ನು ಕರೆ ತಂದಿದ್ದವು.
ಮಂಗಳೂರಿನ ಕೋಡಿಕಲ್ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನಾನೊಬ್ಬಳೇ ಇದ್ದೇನೆ. ಪ್ರತಿ ಚುನಾವಣೆಗೆ ಊರಿಗೆ ಬಂದು ತಪ್ಪದೇ ಮತ ಹಾಕುತ್ತೇನೆ ಎಂದು ದ್ಯಾಮವ್ವ ದೇವನಿ ಹೇಳಿದರು.
ಮಂಗಳೂರಿನ ಕೊಟ್ಟಾರ ಚೌಕಿಯಿಂದ ನಮ್ಮ ಬಸ್ ಹೊರಟಿದ್ದು ಈ ಬಸ್ ನಲ್ಲಿ 67 ಮಂದಿ ಬಂದಿದ್ದಾರೆ ಎಂದು ಮತದಾರರನ್ನು ಕರೆತಂದ ಕನಕಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.