
ಗುಳೇದಗುಡ್ಡ: ಪಟ್ಟಣದ ನಗರಖಾನ ಪೇಟೆಯಲ್ಲಿನ ಶಿವಯೋಗಿ ಶಿವಪ್ಪಯ್ಯ ಹಾಗೂ ಸಂಗಪ್ಪಯ್ಯ ಮಠದ ರಥೋತ್ಸವ ಅಪಾರ ಭಕ್ತ ಸಮೂಹದ ನಡುವೆ ಬಹಳಷ್ಟು ವೈಭವದಿಂದ ಶುಕ್ರವಾರ ನಡೆಯಿತು.
ರಥೋತ್ಸವದ ಮೊದಲು ರಥದ ಪಾಲಕಿ ಉತ್ಸವ ಹಾಗೂ ರಥದ ಕಳಸದ ಮೆರವಣಿಗೆ ಬಹಳಷ್ಟು ವೈಭವದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕಳಸರಾತಿಯೊಂದಿಗೆ ಮಹಿಳೆಯರು ಈ ರಥದ ಕಳಸದ ಹಾಗೂ ಪಾಲಿಕೆ ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಕಲ್ಯಾಣಿ ಅವರ ಮನೆಯಿಂದ ಕಳಸದ ಮೆರವಣಿಗೆ ಸಂಭ್ರಮದಿಂದ ಜರುಗಿತು. ಭಾವಿಕಟ್ಟಿಯವರ ನಾಟ್ಯಸಂಘದ ಯುವಕರು ಪಾಲಕಿ ಹಾಗೂ ಕಳಸದ ಮೆರವಣಿಗೆಯಲ್ಲಿ ಕರಡಿ ಮಜಲು ನುಡಿಸಿದರು.
ರಥೋತ್ಸವದ ಅಂಗವಾಗಿ ಶಿವಪ್ಪಯ್ಯ ಹಾಗೂ ಸಂಗಪ್ಪಯ್ಯ ಮಠವನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ಮಠದ ಸಂಗಯ್ಯ ಶಿವಪ್ಪಯ್ಯನಮಠ ಅವರು ದೇವರಿಗೆ ವಿಶೇಷ ಹೂವಾಲಂಕಾರ ಮಾಡಿ ಶ್ರದ್ಧಾ ಭಕ್ತಿಯಿಂದ ಅಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಬಳಿಕ ಸಂಜೆ ಯುವಕರ ಹಿಲಾಲಿನೊಂದಿಗೆ ಭವ್ಯ ರಥೋತ್ಸವ ಜರುಗಿತು. ಹಾಗೂ ಆಕರ್ಷಕ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶಿವಪ್ಪಯ್ಯ ಮಠದ ಈ ಭವ್ಯ ರಥೋತ್ಸವದಲ್ಲಿ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ಅಮರಪ್ಪ ಪರಗಿ, ಶಿವಶಂಕ್ರಪ್ಪ ಸಾರಂಗಿ, ಚಂದ್ರಕಾಂತ ಶೇಖಾ, ಷಣ್ಮುಖಪ್ಪ ತಟ್ಟಿ, ಬಸಪ್ಪ ಸಾರಂಗಿ, ವಾಸಪ್ಪ ಕಾಳಿ, ಸಿದ್ದು ಪರಗಿ, ಟೋಪಣ್ಣ ಕುಪ್ಪಸ್ತ, ಸುರೇಶ ಸಾರಂಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.