
ಬಾಗಲಕೋಟೆ: ಜಿಲ್ಲೆಯ ನಗರಗಳಲ್ಲಿ ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿ ಅವರ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.
ಭಾರತೀಯ ನೌಕಾದಳದ ಪಿತಾಮಹ ಎಂದು ಘೋಷಿಸಬೇಕು. ಬಾಗಲಕೋಟೆ ರೈಲು ನಿಲ್ದಾಣಕ್ಕೆ ಇಮ್ಮಡಿ ಅವರ ಹೆಸರಿಡಬೇಕು ಎಂದು ಆಗ್ರಹಿಸಲಾಯಿತು.
ಜಿಲ್ಲಾ ಅಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಜಗತ್ತಿಗೆ ತಿಳಿದಿರುವಂತೆ ಶಕ್ತಿಶಾಲಿ ಸೈನ್ಯ ಕಟ್ಟಿ ಭಾರತವನ್ನು ಆಳಿದ ಕೀರ್ತಿ ಇಮ್ಮಡಿ ಪುಲಿಕೇಶಿಗೆ ಸಲ್ಲುತ್ತದೆ. ಬಾದಾಮಿ ಇತಿಹಾಸವನ್ನು ಮರೆತಿದ್ದೇವೆ. ಪ್ರವಾಸಿಗರಿಗೆ ಅಂತಹ ಶೂರರನ್ನು ಪರಿಚಯಿಸುವಲ್ಲಿ ವಿಫಲರಾಗಿದ್ದೇವೆ ಎಂದರು.
ರಾಜ್ಯ ವಕ್ತಾರ ಬಿ.ಎಂ.ಪಾಟೀಲ ಮಾತನಾಡಿ, ಕನ್ನಡ ನಾಡು-ನುಡಿಗೆ ಕೀರ್ತಿ ಕಳಶವಾದ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆಗಳನ್ನು ನಗರ ಸೇರಿದಂತೆ ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಗೌರವ ಅಧ್ಯಕ್ಷ ಪರಶುರಾಮ ಭಾವಿಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ಕೋಲಾರ, ಜಿಲ್ಲಾ ಸಂಚಾಲಕ ಗಣೇಶ ನಾಯಕ, ವಿಷ್ಣು ಬಾರಕೇರ, ಉಮೇಶ ಒಡೆಯರ್, ಸಿದ್ದಣ್ಣ ಕಾಳೆ, ಕಸ್ತೂರಿಬಾಯಿ ಮೆಹರವಾಡೆ, ಸಾದಿಕ್ ತಾಳಿಕೋಟಿ, ಪರಶುರಾಮ ಬುಳ್ಳಾಪುರ, ಸಂತೋಷ ಚಿನಿವಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.