ಬಾಗಲಕೋಟೆ: ಮನದ ಕಲ್ಮಶಗಳನ್ನು ಹೋಗಲಾಡಿಸಿ ಉತ್ತಮ ಮೌಲ್ಯಗಳನ್ನು ತುಂಬಿ ಶ್ರೇಷ್ಠವ್ಯಕ್ತಿಯನ್ನಾಗಿಸಿ ಮನುಷ್ಯನ ಬದುಕನ್ನು ಅರಳಿಸುವ ಶಕ್ತಿ ಗುರು ಪರಂಪರೆಗೆ ಇದೆ ಎಂದು ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಿವಾನಂದ ಜಿನ್ನಲ್ಲಿರುವ ಬಿಜೆಪಿ ಕಾರ್ಯಾಲದಲ್ಲಿ ಗುರುವಾರ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಹಾಗೂ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತಸಹಾಯಕರನ್ನಾಗಿ ನೇಮಿಸಿಕೊಂಡು ತಮ್ಮ ಪ್ರತಿ ಕೆಲಸದಲ್ಲಿ ಜೊತೆಗೆ ಇರುವಂತೆ ನೋಡಿಕೊಂಡಿದ್ದರು ಎಂದರು.
ಹಡಪದ ಅಪ್ಪಣ್ಣನವರ ಕಾಯಕದೊಂದಿಗೆ ಜನರ ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಬಹುದೊಡ್ಡ ಕಾರ್ಯ ಮಾಡಿದ ಶರಣರಾಗಿದ್ದಾರೆ. ವ್ಯಾಸ ಮಹರ್ಷಿಯ ಜನ್ಮ ದಿನವನ್ನೇ ಗುರು ಪೂರ್ಣಿಮೆಯನ್ನಾಗಿ ಆಚರಿಸುತ್ತ ಬಂದಿದ್ದು, ಭಾರತದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಇಂದಿನ ಯುವ ಜನಾಂಗಕ್ಕೆ ಗುರುವಿನ ಮಹತ್ವ, ಗುರು ಪರಂಪರೆ ತಿಳಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಆ ಕಾಲದಲ್ಲಿ ಶರಣರು ಅನುಭವ ಮಂಟಪದ ಮೂಲಕ ಜಾತಿ ರಹಿತ ಸಮಾಜ ಕಟ್ಟಬೇಕು, ಜಾತ್ಯತೀತ ಸಮಾಜ ನಿರ್ಮಾಣವಾಗಬೇಕು, ಮೇಲು ಕೀಳು ಹೋಗಬೇಕು ಎಂಬ ಆಶಯದೊಂದಿಗೆ ಬಹು ದೊಡ್ಡ ಕ್ರಾಂತಿ ಮಾಡಿದ್ದರು. ಯಾವುದೇ ಕಾಯಕ ದೊಡ್ಡದ್ದು, ಸಣ್ಣದು ಇರಲ್ಲ, ಕಾಯಕದಲ್ಲಿ ಕೀಳರಿಮೆ ಬೇಡ ಎಂದರು.
ಗುರುಪಾದ ಶಿವಾಚಾರ್ಯ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು. ಮುಖಂಡರಾದ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ್ ಶಿಂಧೆ, ರಾಜು ನಾಯ್ಕರ್, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಭಾಗೀರಥಿ ಪಾಟೀಲ, ಸವಿತಾ ಲೆಂಕೆಣ್ಣವರ, ಶೋಭಾ ರಾವ್, ಯಲ್ಲಪ್ಪ ನಾರಾಯಣಿ, ಬಸವರಾಜ ಹುನಗುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.