ADVERTISEMENT

ಅಂತರಂಗದಲ್ಲಿರುವುದು ಆನಂದ, ಬಾಹ್ಯದಲ್ಲಲ್ಲ: ಚಿಂತಕ ಎಂ.

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 5:38 IST
Last Updated 31 ಆಗಸ್ಟ್ 2022, 5:38 IST
ಬಾಗಲಕೋಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಚಿಂತಕ ಎಂ. ಪ್ರವಚನ ನೀಡಿದರು
ಬಾಗಲಕೋಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಚಿಂತಕ ಎಂ. ಪ್ರವಚನ ನೀಡಿದರು   

ಬಾಗಲಕೋಟೆ: ಜನರು ಬಾಹ್ಯದಲ್ಲಿ ಆನಂದ ಹುಡುಕುತ್ತಿದ್ದಾರೆ. ಆದರೆ, ಅದು ಅಂತರಂಗದಲ್ಲಿದೆ. ಅದನ್ನು ಅರಿಯದ ಹೊರತು ಬದುಕು ಪೂರ್ಣವಾಗುವುದಿಲ್ಲ ಎಂದು ಚಿಂತಕಎಂ. ಹೇಳಿದರು.

ಬಸವೇಶ್ವರ ಎಂಜಿನಿಯರಿಂಗ್ ಕಾಲೇಜ್‌ ಸಭಾಂಗಣದಲ್ಲಿ ಮಂಗಳವಾರ ದಿ ಸತ್ಸಂಗ ಫೌಂಡೇಷನ್, ಬ.ವಿ.ವ. ಸಂಘದಿಂದ ಆಯೋಜಿಸಿದ್ದ ಸತ್ಸಂಗದಲ್ಲಿ ಅವರು ಪ್ರವಚನ ನೀಡಿದರು.

ಸತ್ ಎಂದರೆ ಸತ್ಯ, ಅದುವೇ ಶಾಶ್ವತವಾದದ್ದು. ಸತ್ಯದ ಬಗ್ಗೆ ಚಿಂತನೆ ಮಾಡುವುದೇ ಸಂಗ, ಇವೆರಡು ಕೂಡಿದರೆ ಸತ್ಸಂಗವಾಗುತ್ತದೆ.ಬಸವಣ್ಣ ಕೂಡ ಆಂತರಿಕವಾಗಿ ಆನಂದ, ಭಗವಂತನನ್ನು ಹುಡುಕು ಎಂದಿದ್ದಾರೆ ಎಂದರು.

ADVERTISEMENT

ಆನಂದ ಪಡೆಯುವುದಕ್ಕಾಗಿ ಮನುಷ್ಯ ಪ್ರೇಮ, ಮದುವೆ ಮಾಡಿಕೊಳ್ಳುತ್ತಾನೆ. ಆದರೂ, ಆನಂದ ಸಿಗುವುದಿಲ್ಲ, ಕೆಲವರು ಬೇಗನೇ ಸತ್ಯ ಕಂಡುಕೊಳ್ಳುತ್ತಾರೆ. ಇದನ್ನೇ ಯೋಗಿಗಳು ನಿನ್ನಲ್ಲಿನ ಪರಮಾತ್ಮನನ್ನು ಹುಡುಕು ಎಂದು ಬೋಧೊಸಿದ್ದಾರೆ ಎಂದು ಹೇಳಿದರು.

ಮೃತ್ಯು ಯಾರಿಗೆ ಯಾವಾಗ ಬರುತ್ತದೆ ಗೊತ್ತಿಲ್ಲ. ಎಂತಹ ಸಾಧಕರಿಗೂ ಸಾವು ತಪ್ಪಿದ್ದಲ್ಲ. ಅನಂತಂ, ಆನಂದಂ, ಬ್ರಹ್ಮಂ ಎಂದು ಹೇಳಲಾಗಿದೆ. ನಮ್ಮಲ್ಲಿ ಪರಬ್ರಹ್ಮನ ಅಂಶವಿದೆ. ತನ್ನ ಹೊಟ್ಟೆಯಲ್ಲಿ ಕಸ್ತೂರಿ ಸುವಾಸನೆಯಿದೆ ಎಂದು ಗೊತ್ತಿದ್ದರೂ, ಕಸ್ತೂರಿ ಮೃಗ ಕಾಡೆಲ್ಲ ಹುಡುಕುತ್ತದೆ. ನಮ್ಮ ಸ್ಥಿತಿಯೂ ಹೀಗೆ ಆಗಿದೆ. ನಮ್ಮಲ್ಲಿ ನಾವೇ ಆನಂದ ಕಂಡುಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬವಿವ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ಬಸವಣ್ಣವರ ಆದರ್ಶದಲ್ಲಿ ಜಾತಿ, ಮತ, ಪಂಥ ಮೀರಿ ಎಂ ಅವರು ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂಘಟಕ ರಾಜಶೇಖರ ಅಡಿಕೇನವರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.