ಸಚಿವ ಆರ್.ಬಿ. ತಿಮ್ಮಾಪುರ
ಬಾಗಲಕೋಟೆ: ಮಳೆಯಿಂದಾಗಿ ಜಿಲ್ಲೆಯ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುವ ಅಂದಾಜು ಇದ್ದು, ₹464 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರು, ಸೂರ್ಯಕಾಂತಿ, ತೊಗರಿ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಹಾಳಾಗಿವೆ. ಇನ್ನು ಸಮೀಕ್ಷೆ ನಡೆದಿದೆ. ಅಂತಿಮ ವರದಿ ಬರಬೇಕಿದೆ. ನೈಸರ್ಗಿಕ ವಿಕೋಪದಡಿ ಪರಿಹಾರ ನೀಡಲು ₹85 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದರು.
ಮರ ಬಿದ್ದು, ಸಿಡಿಲು ಬಡಿದು, ನದಿಗೆ ಕಾಲು ಜಾರಿ ಬಿದ್ದು ಮೂವರು ಜೀವ ಕಳೆದುಕೊಂಡಿದ್ದರು. ಅವರ ಕುಟುಂಬದ ಸದಸ್ಯರಿಗೆ ಪರಿಹಾರ ವಿತರಿಸಲಾಗಿದೆ. 58 ಜಾನುವಾರುಗಳು ಮೃತವಾಗಿದ್ದು, ₹6.34 ಲಕ್ಷ ಪರಿಹಾರ ನೀಡಲಾಗಿದೆ. 728 ಮನೆಗಳ ಹಾನಿಯಾಗಿದ್ದು, ಈಗಾಗಲೇ ₹1.20 ಕೋಟಿ ಪರಿಹಾರ ಪಾವತಿಸಲಾಗಿದೆ. 223 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
ಹೆಸ್ಕಾಂನ ವಿದ್ಯುತ್ ಜಾಲ, ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಾಳಾಗಿವೆ. ಅವುಗಳ ದುರಸ್ತಿ ಕಾರ್ಯವನ್ನೂ ಈಗಾಗಲೇ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಖಾತೆಯಲ್ಲಿಯೂ ಅನುದಾನ ಲಭ್ಯವಿದೆ. ವಾರದಲ್ಲಿ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಮೊದಲು ತಿಂಗಳ ಕಾಲ ಮಳೆಯಾಗದೇ ಬೆಳೆ ಹಾನಿಯಾಗಿತ್ತು. ನಂತರ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಯಾಗಿದೆ. ಸರ್ಕಾರ ರೈತರ ನೆರವಿಗೆ ನಿಂತಿದೆ. ಸೂಕ್ತ ಪರಿಹಾರ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಶಾಸಕರಾದ ಎಚ್.ವೈ. ಮೇಟಿ, ಭೀಮಸೇನ ಚಿಮ್ಮನಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.