
ಹುನಗುಂದ: ಇಂದಿನ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿರುವ ಸಂದರ್ಭದಲ್ಲಿ ಕಥೆಗಾರ ಶ್ರೀಶೈಲ ಗೋಲಗುಂಡ ಅವರು ದ್ಯಾಮ್ರ ಯಮ್ನವ್ವ ಮತ್ತು ಇತರ ಕಥೆಗಳು ಮಾನವೀಯತೆಯನ್ನು ಪುನರ್ ಸೃಷ್ಟಿಸುವ ಅಪರೂಪದ ಕಥಾ ಸಂಕಲನವಾಗಿದೆ ಎಂದು ವಿಜಯಪುರ ಜಿಲ್ಲೆ ತಾಳಿಕೋಟಿ ಖಾಸ್ಗತೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಜಾತಾ ಚಲವಾದಿ ಹೇಳಿದರು.
ಅವರು ಪಟ್ಟಣದ ಹೊನ್ನಕುಸುಮ ವೇದಿಕೆ ವತಿಯಿಂದ ತಿಂಗಳು- ಬೆಳಕು 31ನೇ ಕಾರ್ಯಕ್ರಮದಲ್ಲಿ ವಿ.ಎಂ.ಎಸ್. ಆರ್. ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಗೋಲಗುಂಡ ಅವರ 'ದ್ಯಾಮ್ರ ಯಮ್ನವ್ವ ಮತ್ತು ಇತರ ಕಥೆಗಳು' ಎಂಬ ಕಥಾಸಂಕಲನ ಕುರಿತು ಅವರು ಮಾತನಾಡಿದರು.
ಕಥಾಸಂಕಲನದಲ್ಲಿನ ಎಲ್ಲಾ ಹತ್ತು ಕಥೆಗಳು ಹೃದಯ ಸ್ಪರ್ಶಿಯಾಗಿದ್ದು, ಜೀವನದ ಮೌಲ್ಯಗಳನ್ನು ಎತ್ತಿ ಹಿಡಿದಿವೆ ಎಂದರು.
ಕಥೆಗಾರ ಶ್ರೀಶೈಲ ಗೋಲಗುಂಡ ಮಾತನಾಡಿ, ಪ್ರತಿಯೊಂದು ಕಥೆಗಳು ವಾಸ್ತವಿಕ ನೆಲೆಯಲ್ಲಿ ರಚನೆಗೊಂಡಿವೆ. ಸಮಾಜದಲ್ಲಿ ನಡೆಯುವ ಪ್ರಸಂಗಗಳನ್ನೇ ಕಥೆಗಳನ್ನಾಗಿ ರೂಪಿಸಿಕೊಂಡಿದ್ದೇನೆ. ಪ್ರಸ್ತುತ ದಿನಮಾನಗಳಲ್ಲಿ ಸಮಾನತೆಯ ಸಮಾಜ ಕಟ್ಟಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹೇಶ ತಿಪ್ಪಾಶೆಟ್ಟಿ ಮಾತನಾಡಿ, ಮೌಲ್ಯಯುತ ಸಾಹಿತ್ಯಕ್ಕೂ ಎಂದೂ ಸಾವಿಲ್ಲ ಗೊಲಗುಂಡರವರ ಕಥೆಗಳಲ್ಲಿ ವಾಸ್ತವಿಕತೆ ಎದ್ದು ಕಾಣುತ್ತದೆ. ಭಾರತೀಯ ಸಂಸ್ಕೃತಿಯ ಚೌಕಟ್ಟಿನಲ್ಲಿ ರೂಪಗೊಂಡ ಇಲ್ಲಿಯ ಕಥೆಗಳು ಮೌಲ್ಯಯುತವಾಗಿದೆ ಎಂದರು.
ಬಿ.ಡಿ.ಚಿತ್ತರಗಿ ಪ್ರಾರ್ಥಿಸಿದರು.ಎಂ.ಡಿ. ಚಿತ್ತರಗಿ ಸ್ವಾಗತಿಸಿ, ನಿರೂಪಿಸಿದರು. ಜಗದೀಶ ಹಾದಿಮನಿ ವಂದಿಸಿದರು. ಹುನಗುಂದ ಮತ್ತು ಇಳಕಲ್ ಅವಳಿ ತಾಲ್ಲೂಕಿನ ಸಾಹಿತ್ಯಾಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.