
ಕೂಡಲಸಂಗಮ: ಈ ವರ್ಷ ರಾಜ್ಯದ 12 ಜಿಲ್ಲೆಗಳಲ್ಲಿ ‘ನಾನು ಲಿಂಗಾಯತ’ ಅಭಿಯಾನ ಮಾಡುವ ಮೂಲಕ ಲಿಂಗಾಯತ ಧರ್ಮ ಸಂಘಟನೆ, ಜಾಗೃತಿ ಮಾಡಲಾಗುವುದು ಎಂದು ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ಸೋಮವಾರ ನಡೆದ 39ನೇ ಶರಣ ಮೇಳದ ಮೊದಲ ದಿನದ ರಾಷ್ಟ್ರೀಯ ಬಸವ ದಳದ 35ನೇ ಅಧಿವೇಶನ ಹಾಗೂ ವ್ಯಸನ ಮುಕ್ತ ಸಮಾಜ ನಿರ್ಮಾಣ ಚಿಂತನ ಗೋಷ್ಠಿ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
‘ಅಭಿಯಾನದಲ್ಲಿ ರಾಷ್ಟ್ರೀಯ ಬಸವ ದಳ ಸಂಘಟನೆ ಕುರಿತು ಚರ್ಚಿಸಲಾಗುವುದು. ಕಳೆದ ವರ್ಷ 6 ಜಿಲ್ಲೆಯಲ್ಲಿ ರಾಷ್ಟ್ರೀಯ ಬಸವ ದಳದ ಅಭಿಯಾನ ಯಶಸ್ವಿಯಾಗಿ ಮಾಡಲಾಗಿದೆ. ಪ್ರತಿ ತಿಂಗಳು ಒಂದು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದರು.
ಬೀದರ ಬಸವ ಗಿರಿಯ ಪ್ರಭುದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಶರಣ ಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳು ಸದ್ಗುಣ ಮೂಡಿಸುತ್ತಿವೆ. ತಾತ್ವಿಕ ಚರಿತ್ರೆ ಹೊಂದಿದ ಲಿಂಗಾಯತ ಧರ್ಮಕ್ಕೆ ಸಾಮಾಜಿಕ ಮಾನ್ಯತೆ ಅಗತ್ಯ ಇದೆ. ವಚನ ಸಾಹಿತ್ಯ, ಪ್ರವಚನದ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ’ ಎಂದರು.
ರಬಕವಿ, ಬನಹಟ್ಟಿ ಬ್ರಹ್ಮಾನಂದ ಮಠದ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಜಾಗತಿಕ, ಆಧುನಿಕ ತಂತ್ರಜ್ಞಾನದಿಂದ ಧಾರ್ಮಿಕ, ಆಧ್ಯಾತ್ಮಿಕ, ನೈತಿಕ ಚೌಕಟ್ಟು ಸಡಿಲಗೊಳ್ಳುತ್ತಿದೆ. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರ ತ್ಯಾಗ, ಸಂಕಲ್ಪ ಇಂದಿನ ಯುವ ಜನಾಂಗಕ್ಕೆ ಆದರ್ಶವಾಗಿದೆ’ ಎಂದು ತಿಳಿಸಿದರು.
ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ‘35 ವರ್ಷದ ಹಿಂದೆ ಆರಂಭವಾದ ರಾಷ್ಟ್ರೀಯ ಬಸವ ದಳ ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದೆ. ಕಾರ್ಯ ನಿಷ್ಠೆಯಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ದೇಶದ 10 ರಾಜ್ಯಗಳಲ್ಲಿ ಸಂಘಟನೆ ಹೊಂದಿದ್ದು, ಇನ್ನಷ್ಟು ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದೆ’ ಎಂದರು.
ಸಮಾರಂಭದಲ್ಲಿ ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ, ಉಳವಿ ಅಕ್ಕನಾಗಲಾಂಬಿಕಾ ಪೀಠದ ಮಾತೆ ದಾನೇಶ್ವರಿ, ಬೆಂಗಳೂರು ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ, ತೆಲಂಗಾಣ ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಶಂಕರೆಪ್ಪ ಪಾಟೀಲ, ರಾಷ್ಟ್ರೀಯ ಬಸವ ದಳ ರಾಜ್ಯ ಗೌರವಾಧ್ಯಕ್ಷ ಬಸವರಾಜ ಕೊಂಡಗೋಳಿ, ಮುಖಂಡರಾದ ಹುಬ್ಬಳ್ಲಿಯ ಎಸ್.ಬಿ.ಜೋಡಳ್ಳಿ, ಬೀದರ ಸೋಮಶೇಖರ ಪಾಟೀಲ ಗಾದಗೆ, ಕೊಪ್ಪಳದ ವೀರಣ್ಣ ಲಿಂಗಾಯತ, ಬಳ್ಳಾರಿಯ ಕೆ.ವಿ.ರವಿಶಂಕರ ಮುಂತಾದವರು ಇದ್ದರು.
‘ಬೆಂಗಳೂರಿನಲ್ಲಿ ಫೆ.8ಕ್ಕೆ ಬಸವದಳದ ರಾಷ್ಟ್ರೀಯ ಅಧಿವೇಶನ’
ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಕೆ.ವಿ.ವಿರೇಶ ಮಾತನಾಡಿ ‘ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧಿವೇಶನವನ್ನು ಪ್ರತಿ ವರ್ಷ ಫೆಬ್ರುವರಿ ತಿಂಗಳ ಎರಡನೇ ಭಾನುವಾರ ಹಮ್ಮಿಕೊಳ್ಳಲಾಗುವುದು. ಈ ವರ್ಷದ ಅಧಿವೇಶನವನ್ನು ಬೆಂಗಳೂರಿನ ಕುಂಬಳಗೋಡು ಬಸವ ಗಂಗೋತ್ರಿ ಆಶ್ರಮದಲ್ಲಿ ಫೆ.8 ರಂದು ಹಮ್ಮಿಕೊಳ್ಳಲಾಗಿದೆ. ಎಲ್ಲ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು ಬರಬೇಕು. ಈ ಅಧಿವೇಶನದಲ್ಲಿ ರಾಷ್ಟ್ರೀಯ ಬಸವ ದಳದ ಸಂಘಟನೆ ಲಿಂಗಾಯತ ಧರ್ಮಕ್ಕೆ ತೊಂದರೆ ಕೊಡುತ್ತಿರುವ ವೀರಶೈವ ಹಿಂದೂ ಪದಗಳ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.