
ಇಳಕಲ್: ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆರ್. ವೀರಮಣಿ ಕ್ರೀಡಾಂಗಣದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ನಾಯಕತ್ವದಲ್ಲಿ ಭಾನುವಾರ ಆರಂಭವಾಗಲಿರುವ ಇಳಕಲ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಜನ್ 8ರ ಉದ್ಘಾಟನೆ ಅಂಗವಾಗಿ ನಗರದಲ್ಲಿ ಶನಿವಾರ ಸಂಜೆ ಟ್ರೋಫಿಯ ಮೆರವಣಿಗೆ ನಡೆಯಿತು.
ಕೂಡಲಸಂಗಮದಿಂದ ಆಗಮಿಸಿದ ಕ್ರೀಡಾ ಜ್ಯೋತಿಯ ಮೆರವಣಿಗೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಟ ಡಾಲಿ ಧನಂಜಯ, ನಟಿಯರಾದ ರಾಗಿಣಿ, ಸಪ್ತಮಿಗೌಡ ಮತ್ತೀತರ ಸಿನಿ ತಾರೆಯರು ಪಾಲ್ಗೊಂಡು ಮೆರವಣಿಗೆಗೆ ರಂಗು ತುಂಬಿದರು. ವಿವಿಧ ಫ್ರಾಂಚೈಸಿಗಳ ಮಾಲೀಕರು, ವ್ಯವಸ್ಥಾಪಕರು, ಆಟಗಾರರು, ಸಾವಿರಾರು ಕ್ರೀಡಾಭಿಮಾನಿಗಳು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಟ ಡಾಲಿ ಧನಂಜಯ ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ರೀಡೆ ಮತ್ತು ಸಂಸ್ಕೃತಿ ಜನರನ್ನು ಬೆಸೆಯುತ್ತದೆ. ಶಾಸಕ ಕಾಶಪ್ಪನವರ ನಿರಂತರವಾಗಿ ಐಪಿಎಲ್ ಆಯೋಜಿಸುವ ಮೂಲಕ ಗ್ರಾಮೀಣ ಯುವಕರಿಗೆ ಅವಕಾಶ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾದುದು. ಸಿನೆಮಾ ಹಾಗೂ ಕಲಾವಿದರನ್ನು ಪ್ರೋತ್ಸಾಯಿಸುವ ಉತ್ತರ ಕರ್ನಾಟಕ ಜನರನ್ನು ಭೇಟಿಯಾಗೋದಕ್ಕೆ ನನಗೆ ಸಂತೋಷವಾಗುತ್ತದೆ. ಪ್ಯಾನ್ ಇಂಡಿಯಾಗಾಗಿ ಅಂತ ಸಿನೆಮಾ ಮಾಡೋದಲ್ಲ, ಒಳ್ಳೆಯ ಸಿನೆಮಾ ಮಾಡೋದಷ್ಟೆ ಮುಖ್ಯ. ಉಳಿದದ್ದು ಪ್ರೇಕ್ಷಕರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು.
ಮೆರವಣಿಗೆಯಲ್ಲಿ ವೀಣಾ ಕಾಶಪ್ಪನವರ, ಶರಣಪ್ಪ ಆಮದಿಹಾಳ, ಸುಧಾರಾಣಿ ಸಂಗಮ, ಶಿವಾನಂದ ಮುಚಖಂಡಿ, ಮಹಾಂತೇಶ ನರಗುಂದ, ಅಬ್ದುಲ್ ರಜಾಕ ತಟಗಾರ, ರಾಘವೇಂದ್ರ ಚಿಂಚಮಿ, ಅಮೃತ್ ಬಿಜ್ಜಳ ಹುನಗುಂದ ಸ್ಪೋರ್ಟ್ಸ್ ಮತ್ತು ಕಲ್ಬರಲ್ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.