ಬಾಗಲಕೋಟೆ: ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆಗಬೇಕಾದರೆ ಡೀಲ್ ನಡೆಯಲೇಬೇಕು. ಆ ಡೀಲ್ ಮಾಡಿ, ಡಿವೈಎಸ್ಪಿ ಇಲ್ಲಿಗೆ ಕರೆ ತಂದವರು ಯಾರು ಎಂದು ಬಹಿರಂಗವಾಗಬೇಕು ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಆಗ್ರಹಿಸಿದರು.
ವೇದಿಕೆ ವತಿಯಿಂದ ಬಾದಾಮಿ ತಾಲ್ಲೂಕಿನ ಕೆರೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆರೂರ ಚಲೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ನಾನೊಮ್ಮೆ ಗೃಹ ಸಚಿವರನ್ನು ಭೇಟಿಯಾಗಲು ಹೋದಾಗ, ಅಲ್ಲಿದ್ದವರಿಗೆ ಪೊಲೀಸ್ ವರ್ಗಾವಣೆಯಲ್ಲಿ ನನ್ನದೇನೂ ಇಲ್ಲ. ಸ್ಥಳೀಯ ಶಾಸಕರನ್ನು ಭೇಟಿಯಾಗು ಎಂದು ಸಚಿವರು ಹೇಳಿದ್ದರು. ಇವರ ವರ್ಗಾವಣೆ ಹಿಂದಿರುವವರು ಯಾರು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಅವರಿಗೆ ವಿರೋಧ ಪಕ್ಷದ ನಾಯಕರ ಜತೆಗೆ ಹೊಂದಾಣಿಕೆ ಇರುತ್ತದೆ. ಇಬ್ಬರೂ (ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ) ಜನತಾ ಪರಿವಾರಕ್ಕೆ ಸೇರಿದವರು. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಅಧಿಕಾರಿಯನ್ನು ಜಾಗೃತ ಸಮಾಜ ಸಹಿಸುವುದಿಲ್ಲ ಎಂದರು.
ಮುಖ್ಯಮಂತ್ರಿಗೆ ಇಲ್ಲಿನ ಘಟನೆ ಬಗ್ಗೆ ಡಿವೈಎಸ್ಪಿ ಪ್ರಶಾಂತ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಡಿವೈಎಸ್ಪಿ ಮಾಡುವ ತಪ್ಪಿನಿಂದ ಚುನಾವಣೆಯಲ್ಲಿ ನಿಮ್ಮ ನಾಯಕನ ಬಾಯಿಗೆ ಮಣ್ಣು ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.