ADVERTISEMENT

ಕೃಷ್ಣಾ ನದಿ ಉಳಿವಿಗೆ ಜಲ ಯಾತ್ರೆ ಆರಂಭ:ಕೂಡಲಸಂಗಮದಿಂದ ಮಹಾಬಲೇಶ್ವರದವರೆಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:20 IST
Last Updated 12 ಮೇ 2025, 16:20 IST
ಕೂಡಲಸಂಗಮದಲ್ಲಿ ಸೋಮವಾರ ಆರಂಭಗೊಂಡ ಕೃಷ್ಣಾ ಜಲಯಾತ್ರೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ, ಮುಖಂಡ ಎಂ.ಪಿ.ನಾಗೌಡ, ಮನಗೂಳಿ ವಿರತೀಶಾನಂದ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.
ಕೂಡಲಸಂಗಮದಲ್ಲಿ ಸೋಮವಾರ ಆರಂಭಗೊಂಡ ಕೃಷ್ಣಾ ಜಲಯಾತ್ರೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ, ಮುಖಂಡ ಎಂ.ಪಿ.ನಾಗೌಡ, ಮನಗೂಳಿ ವಿರತೀಶಾನಂದ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.   

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಕೃಷ್ಣಾ ನದಿ ಕಲುಷಿತಗೊಳ್ಳದಂತೆ ತಡೆಯಬೇಕು ಮತ್ತು ಸಂರಕ್ಷಣೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಇಲ್ಲಿನ ಬಸವಣ್ಣನ ಐಕ್ಯ ಮಂಟಪದಿಂದ ಮಹಾರಾಷ್ಟ್ರದ ಮಹಾಬಲೇಶ್ವರದವರೆಗೆ ಕೃಷ್ಣಾ ಜಲಯಾತ್ರೆ ಸೋಮವಾರ ಆರಂಭವಾಯಿತು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ನಿತ್ಯದ ಬದುಕು, ಕೃಷಿ, ಕೈಗಾರಿಕೆಗೆ ನೀರು ಅಗತ್ಯ. ಕೃಷ್ಣಾ, ಮಲಪ್ರಭಾ ನದಿಯನ್ನು ಕಲುಷಿತಗೊಳ್ಳದಂತೆ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನದಿಗಳನ್ನು ರಕ್ಷಿಸದಿದ್ದರೆ, ಮುಂದಿನ ಪೀಳಿಗೆಗೆ ನಾವೇ ಅನ್ಯಾಯ ಮಾಡಿದಂತೆ’ ಎಂದರು.

ಧಾರವಾಡ ವಾಲ್ಮಿ ನಿವೃತ್ತ ನಿರ್ದೇಶಕ ರಾಜೇಂದ್ರ ಪೊದ್ದಾರ ಮಾತನಾಡಿ, ‘ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಅರಣ್ಯ ನಾಶವಾಗುತ್ತಿದೆ. ನದಿ, ಉಪನದಿ ತೀರಗಳ ಒತ್ತುವರಿ ಆಗಿದೆ. ಮರಳುಗಳ ಅಕ್ರಮ, ವ್ಯಾಪಕ ಗಣಿಗಾರಿಕೆ ನಡೆದಿದೆ. ಇದು ನದಿಗಳಿಗೆ ಅಪಾಯಕಾರಿ’ ಎಂದರು.

ADVERTISEMENT

‘ನದಿ ತೀರದಲ್ಲಿನ ಸಕ್ಕರೆ, ಕಾಗದ, ಗೊಬ್ಬರ ಮುಂತಾದ ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಪದಾರ್ಥಗಳು, ಪ್ಲಾಸ್ಟಿಕ್ ಬಳಕೆ, ಪೂಜೆ, ನಂಬಿಕೆಗಳ ಹೆಸರಿನಲ್ಲಿ ನದಿ ತೀರ ಹೆಚ್ಚು ಕಲ್ಮಶಗೊಳ್ಳುತ್ತಿದೆ. ಈ ಸಮಸ್ಯೆಗಳಿಂದ ನದಿಯನ್ನು ಮುಕ್ತಮಾಡಲು, ಜನರಿಗೆ ಜಾಗೃತಿ ಮೂಡಿಸಲು ಯಾತ್ರೆ ಹಮ್ಮಿಕೊಂಡಿದೆ. ಆಸಕ್ತರು ಭಾಗವಹಿಸಬಹುದು’ ಎಂದರು.

ಹಿರಿಯ ಮುಖಂಡ ಎಂ.ಪಿ.ನಾಡಗೌಡ, ಮನಗೂಳಿ ವಿರತೀಶಾನಂದ ಸ್ವಾಮೀಜಿ, ಬಸವನಬಾಗೇವಾಡಿ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ, ನದಿ ಸಂರಕ್ಷಣೆ ಹೋರಾಟಗಾರ ಸತ್ಯನಾರಾಯಣ, ಮಹಾರಾಷ್ಟ್ರದ ನರೇಂದ್ರ ಚೂಘ, ಅಮರೇಶ ನಾಗೂರ, ಗಂಗಾಧರ ದೊಡಮನಿ, ಗಂಗಣ್ಣ ಬಾಗೇವಾಡಿ, ಶೇಖರಗೌಡ ಗೌಡರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ ರಾಂಪೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.