
ಜಮಖಂಡಿ: ಇಲ್ಲಿನ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಕುಂಬಾರ ಕೆರೆ ಹಾಗೂ ವಿವಿಧ ಸ್ಥಳಗಳಲ್ಲಿ ದಶಕಗಳಿಂದ ಬೀಡುಬಿಟ್ಟಿದ್ದ 33 ಅನಧಿಕೃತ ಶೆಡ್ ಹಾಗೂ ಅಂಗಡಿಗಳನ್ನು ತೆರವುಗೊಳಿಸಲು ನಗರಸಭೆ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿದರು.
ಸುಮಾರು 7 ಎಕರೆ ವಿಸ್ತೀರ್ಣದ ಕುಂಬಾರ ಕೆರೆಯ ಆವರಣದಲ್ಲಿ 28ಕ್ಕೂ ಹೆಚ್ಚು ಅನಧಿಕೃತ ಶೆಡ್ಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಇದರಿಂದ ಕೆರೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿತ್ತು. ಶುಕ್ರವಾರ ಬೆಳಿಗ್ಗೆ ಪೌರಾಯುಕ್ತ ಜ್ಯೋತಿ ಗಿರೀಶ ನೇತೃತ್ವದಲ್ಲಿ ತೆರವು ಗೊಳಿಸಿದರು.
ದೇಸಾಯಿ ವೃತ್ತ ಹಾಗೂ ಟಿಪ್ಪು ಸುಲ್ತಾನ್ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆ ಬದಿಯ ಒತ್ತುವರಿಗಳನ್ನೂ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಾರ್ಯಾಚರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಾಯುಕ್ತ ಜ್ಯೋತಿ ಗಿರೀಶ, ‘ಕುಂಬಾರ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ₹30 ಲಕ್ಷ ಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ನಗರ ಯೋಜನಾ ಪ್ರಾಧಿಕಾರದಲ್ಲಿರುವ ₹42 ಲಕ್ಷ ಕೆರೆ ಅಭಿವೃದ್ಧಿ ಅನುದಾನವನ್ನೂ ಇದಕ್ಕೆ ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.
ವಾಯುವಿಹಾರಕ್ಕೆ ಕೆರೆಯ ಸುತ್ತಮುತ್ತ ಸುಸಜ್ಜಿತ ಫುಟ್ಪಾತ್ ನಿರ್ಮಾಣ, ಕೆರೆಯ ಆವರಣಕ್ಕೆ ಭದ್ರತೆ ಒದಗಿಸಲು ತಂತಿ ಬೇಲಿ ಅಳವಡಿಕೆ, ಮಕ್ಕಳಿಗೆ ಆಟದ ಮೈದಾನ ಮಕ್ಕಳ ಮನರಂಜನೆಗಾಗಿ ವಿವಿಧ ಆಟದ ಸಾಮಗ್ರಿಗಳ ಅಳವಡಿಕೆ, ಸಾರ್ವಜನಿಕರಿಗಾಗಿ ಪೇ ಅಂಡ್ ಯೂಸ್ ಶೌಚಗೃಹದ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕುಂಬಾರ ಕೆರೆಯು ಹೊಸ ರೂಪ ಪಡೆಯಲಿದೆ. ನಗರದ ಪ್ರಮುಖ ವೃತ್ತಗಳ ಸೌಂದರ್ಯೀಕರಣಕ್ಕೂ ಆದ್ಯತೆ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.