ADVERTISEMENT

ಬಾಗಲಕೋಟೆ: ಅಂಗವಿಕಲರಿಗೆ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 3:52 IST
Last Updated 25 ಜೂನ್ 2022, 3:52 IST

ಬಾಗಲಕೋಟೆ: ಸಮರ್ಥನಂ ಅಂಗವಿಕಲರ ಸಂಸ್ಥೆ, ಕೌಶಲ ಅಭಿವೃದ್ಧಿ ಹಾಗೂ ತರಬೇತಿ ಇಲಾಖೆ ವತಿಯಿಂದ ಜೂನ್‌ 30 ರಂದು ನವನಗರದ ಸೆಕ್ಟರ್‌ 22ರಲ್ಲಿರುವ ಬಾಬು ಜಗಜೀವನ್‌ ರಾಂ ಭವನದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅರುಣಕುಮಾರ್‌ ಮಾತನಾಡಿ, 25ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದು, ಅಂಗವಿಕಲರಿಗಾಗಿರುವ ಮೇಳದ ಪ್ರಯೋಜನವನ್ನು ಅವರು ಪಡೆದುಕೊಳ್ಳಬೇಕು ಎಂದರು.

ಎಸ್‌.ಎಸ್‌.ಎಲ್‌.ಸಿ, ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ ಪಾಸಾಗಿರುವ ಅಂಗವಿಕಲರು ಭಾಗವಹಿಸಬಹುದಾಗಿದೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಉದ್ಯೋಗ ದೊರೆಯದೆ ಹಲವರು ಮನೆಯಲ್ಲಿದ್ದಾರೆ. ಅಂತಹವರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ADVERTISEMENT

ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಮೇಳ ನಡೆಯಲಿದ್ದು, ಬಯೋಡಾಟಾ, 3 ಭಾವಚಿತ್ರ, ಅಂಕಪಟ್ಟಿಗಳು, ಅಂಗವಿಕಲರ ಪ್ರಮಾಣಪತ್ರ, ಆಧಾರ್‌ ಕಾರ್ಡ್ ತರಬೇಕು ಎಂದರು.

ಸಂಸ್ಥೆಯು ರಾಜ್ಯದಲ್ಲಿ 16 ಕೌಶಲ ತರಬೇತಿ ಕೇಂದ್ರಗಳನ್ನು ಹೊಂದಿದ್ದು, 25 ವರ್ಷ ಪೂರ್ಣಗೊಳಿಸಿದೆ. 600ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಿವರಗಳಿಗೆ ಮೊ. 94808 12138, 94808 09598 ಸಂಪರ್ಕಿಸಬಹುದು ಎಂದು ಹೇಳಿದರು.

ಕೌಶಲ ಅಭಿವೃದ್ಧಿ ಮತ್ತು ತರಬೇತಿ ಇಲಾಖೆ ವ್ಯವಸ್ಥಾಪಕ ಎನ್‌.ಎಸ್‌. ಹೆರಗೂಡಿ, ಸಿ.ಎಸ್‌. ಜಾಡಗುತ್ತಿ, ಪಂಡಿತ್‌ ಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.